ಜೀವ ದನಿ

February 23, 2008

ಕೆಂಪು ಜುಟ್ಟಿನ ಹುಂಜ

Filed under: ಅಜ್ಜಿ ಕಥೆ — jeevadani @ 7:24 am

ಅವರಿಬ್ಬರಿದ್ದರು- ಪುಟಾಣಿ ಅಣ್ಣ, ಪುಟ್ಟ ತಂಗಿ. ಇಬ್ಬರಂದರೆ, ಇಬ್ಬರೇ. ಪೂರಾ ಅನಾಥರು. ಹಾ! ಅವರ ಹತ್ತಿರ  ಕೆಂಪು ಜುಟ್ಟಿನಹುಂಜವೊಂದಿತ್ತು. ಅದೆಂದರೆ ಇಬ್ಬರಿಗೂ ಬಹಳ ಪ್ರೀತಿ.
ಒಂದು ದಿನ ತಂಗಿಗೆ ವಿಪರೀತ ಹಸಿವಾಯ್ತು. ಮನೇಲಿ ತಿನ್ನಲಿಕ್ಕೆ ಏನೂ ಇಲ್ಲ! ಸರಿ. ಅಣ್ಣ ಮನೆಯ ಮೂಲೆಮೂಲೆ ಹುಡುಕಿದ. ಕಣಜದ ಬುಡದಲ್ಲೊಂದಷ್ಟು ಗೋಧಿಕಾಳು ಸಿಕ್ಕವು. ಅದನ್ನೇ ಬೀಸಿ ತಂಗಿಗೆ ಚಪಾತಿ ಮಾಡಿಕೊಡುವಾ ಅಂತ ಅಣ್ಣ ಅವನ್ನು ಒಟ್ಟುಮಾಡಿದ. ಇನ್ನೇನು ಬೀಸಬೇಕು, ಹುಂಜ ಅವನನ್ನ ತಡೆಯಿತು. ಒಂದು ಕಾಳು ಗೋಧಿಯನ್ನ ಬಿತ್ತಲು ಹೇಳಿತು. ಹುಡುಗ ಹಾಗೇ ಮಾಡಿದ.
ಮಾರನೆ ದಿನ ಬಾಗಿಲು ತೆರೆದಾಗ ನೋಡುವುದೇನು? ಅಂವ ಬಿತ್ತಿದ ಗೋಧಿಕಾಳು ಮುಗಿಲು ಮೀರಿ ಬೆಳೆದಿತ್ತು. ಅಂಗಳ ತುಂಬ ಹರಡಿತ್ತು ಅದರ ದಪ್ಪ ಕಾಂಡ. ಹುಡುಗನಿಗೆ ಕುತೂಹಲ ತಡೆಯದೆ ಸರಸರನೆ ಕಾಂಡವೇರುತ್ತ ಹೋದ. ಹೋಗುತ್ತ ಹೋಗುತ್ತ ಮೋಡಗಳನ್ನೂ ದಾಟಿ, ಆಕಾಶದ ನೀಲಿಯನ್ನೂ ದಾಟಿ…. ಗೋಧಿ ಗಿಡದ ತುದಿ ಮುಗಿಯುವಲ್ಲಿ ಒಂದು ಮನೆಯ ಎದುರು ಬಂದು ನಿಂತ.
ಆ ಮನೆಯೊಳಗಿಂದ ಘಮಘಮ ವಾಸನೆ…. ಹುಡುಗ ಹೋಗಿ ನೋಡುತ್ತಾನೆ…. ಒಂದು ಮಾಟಾಗಾತಿ ಮುದುಕಿ ಬೀಸೇಕಲ್ಲು ಬೀಸುತ್ತ ಕುಳಿತಿದೆ. ಅದರಿಂದ ದಂಡಿಯಾಗಿ ದೋಸೆಗಳು, ಕಡಬುಗಳು, ಹೋಳಿಗೆ, ಚಕ್ಕುಲಿ, ಕೋಡುಬಳೆ…
ಆಹ್! ಸೊರಸೊರನೆ ಬಾಯಲ್ಲಿ ನೀರೂರಿತು ಹುಡುಗನಿಗೆ!!
ಹಾಗೇ ನೋಡುತ್ತ ನಿಂತವನಿಗೆ ಮುದುಇಯ ಎಡಗಣ್ಣು ಕುರುಡು ಅಂತ ಗೊತ್ತಾಯಿತು. ಅದಕ್ಕೇ, ಕಲ್ಳಬೆಕ್ಕಿನ ಹಾಗೆ ಹೆಜ್ಜೆಯಿಡುತ್ತ ಎಡಬದಿಯಿಂದಲೇ ಮೆಲ್ಲನೆ ನುಸುಳಿ ಅಂಗಿಯನ್ನ ಕೊಟ್ಟೆಯ ಹಾಗೆ ಮಾಡಿಕೊಂಡು ಕೈಲಾದಷ್ಟು ತಿಂಡಿಯನ್ನು ಬಾಚಿಬಾಚಿ ತುಂಬಿಕೊಂಡ. ಮತ್ತೆ ಸರಸರನೆ ಕಾಂಡ ಇಳಿದು ಮನೆ ಸೇರಿದ.
ಅಣ್ಣ ತಂಗಿ ಹೊಟ್ಟೆ ತುಂಬ ತಿಂಡಿಗಳನ್ನು ತಿಂದರು. ಕೆಂಪುಜುಟ್ಟಿನ ಹುಂಜವೂ ಕೊಕ್ಕೊಕ್ಕೋ ಅನ್ನುತ್ತ ಕುಕ್ಕಿ ಕುಕ್ಕಿ ತಿಂದಿತು.

pol-14cock-a-doodle-doo-posters.jpg

ಮತ್ತೆ ಮಾರನೇ ದಿನವೂ ಹುಡುಗ ಕಾಂಡವೇರಿ ಮಾಟಾಗಾತಿಯ ಮನೆಯಿಂದ ತಿಂಡಿ ಹೊತ್ತು ತಂದ. ಹೀಗೇ ನಾಲ್ಕೈದು ದಿನ ಸಾಗಿತು.
ಅದೊಂದು ದಿನ ಒಕ್ಕಣ್ಣಿನ ಮಾಟಗಾತಿ ತನ್ನ ಕುರುಡನ್ನ ಎಡದಿಂದ ಬಲಗಣ್ಣಿಗೆ ಬದಲಿಸಿಕೊಂಡು ಕುಂತಿತ್ತು. ದಿನದಿನವೂ ತಾನು ಬೀಸಿ ಪಡೆದ ತಿಂಡಿಯಲ್ಲಿ ಕಡಿಮೆಯಾಗ್ತಿದೆಯಲ್ಲ ಅಂತ ಅದಕ್ಕೆ ಅನುಮಾನ. ಎಂದಿನಮ್ತೆ ತಿಂಡಿ ಕದಿಯಲು ಹೋದ ಹುಡುಗ ಸಿಕ್ಕಿಬಿದ್ದ!
ಕಟಕಟ ಹಲ್ಲುಕಡಿಯುತ್ತ ಮಾಟಗಾತಿ “ಹುಡುಗಾ! ನೀನೇಯೋ ಇಷ್ಟು ದಿನದಿಂದ ನನ್ನ ತಿಂಡಿಯನ್ನ ಕದೀತಿದ್ದಿದ್ದು? ತಡಿ! ನಿಂಗೆ ತಕ್ಕ ಶಾಸ್ತಿ ಮಾಡ್ತೀನಿ!!” ಅಂತ ಕೂಗಾಡಿತು. ಹಂಡೆಯ ನೀರು ಕಾಯಿಸಲಿಕ್ಕೆ ಹುಡುಗನ್ನೇ ಕಟ್ಟಿಗೆ ಹಾಗೆ ಉರಿಸ್ತೀನಿ ಅಂದುಕೊಂಡಿತು ಮುದುಕಿ. ಸೀದಾ ನೀರೊಲೆ ಹತ್ತಿರ ಕರಕೊಂಡು ಹೋಗಿ ಒಲೆಯೊಳಗೆ ತೂರಲು ಹೇಲೀತು. ಇಷ್ಟೆಲ್ಲ ಅದರೂ ನಮ್ಮ ಹುಡುಗ ಸ್ವಲ್ಪವೂ ಹೆದರಲಿಲ್ಲ. ಒಲೆ ಹತ್ತಿರ ಹೋಗಿ ತಾನು ಅದರಲ್ಲಿ ಹಿಡಿಸೋಲ್ಲ ಅಂತ ನಾಟಕವಾಡಿದ. ಮುದುಕಿ ರೇಗಿ, ಮೈ ಮಡಚಿ ತೂರಿಕೋ ಹುಡುಗಾ ಅಂತು. ಊಹೂಂ. ನಮ್ಮ ಹುಡುಗನ ನಾಟಕವೋ ನಾಟಕ! ಕೊನೆಗೆ, “ನೀನೇ ತೋರಿಸು ಮುದುಕೀ, ಹೇಗೆ ತೂರಬೇಕು ಅಂತ?” ಅಂದ. ಸರಿ. ಮುದುಕಿ ಒಲೆಯೊಳಗೆ ತೂರಿಕೊಂಡಳು. ಹುಡುಗ ಅದೇ ಸಮಯ ಅನ್ನುತ್ತ, ಸೀಮೆ ಎಣ್ಣೆ ಸುರಿದು ಬೆಂಕಿ ಕಡ್ಡಿ ಗೀರಿ ಮಾಟಗಾತಿಯನ್ನ ಸುಟುಬಿಟ್ಟ. ಆಮೇಲೆ ಸೀದಾ ಮಾಯದ ಬೀಸೇಕಲ್ಲನ್ನ ಹಿಡಿದು ಗೋಧಿ ಗಿಡ ಇಳಿದು ಮನೆ ಸೇರಿದ. ಆಮೇಲೆ ಅಣ್ಣ ತಂಗಿ ಸೇರಿ ಗಿಡದ ಕಾಂಡ ಕತ್ತರಿಸಿ ಹಾಕಿದರು!
ಆಮೆಲೆ, ದಿನದಿನವೂ ಅಣ್ಣ ತಂಗಿ ಥರಥರಾವರಿ ತಿಂಡಿ ತಿನ್ನುತ್ತ ಸುಖವಾಗಿದ್ದರು ಅಂತ ಕಥೆ ಮುಗಿಸಿಬಿಡಬಹುದಿತ್ತು! ಆದರೆ ಹಾಗಾಗಲಿಲ್ಲ!!
ಆ ಊರಲ್ಲೊಬ್ಬ ದುಷ್ಟ ರಾಜ. ಅವನಿಗೆ ಅಣ್ಣ ತಂಗಿಯರ ಹತ್ತಿರ ಮಾಯದ ಬೀಸೇಕಲ್ಲಿರುವ ಸಂಗತಿ ತಿಳಿಯಿತು. ಆ ಮಕ್ಕಳಿಂದ ಅವನು ಅದನ್ನ ಕಿತ್ತುಕೊಳ್ಳಲು ಉಪಾಯ ಮಾಡಿದ. ಬೀಸೇಕಲ್ಲನ್ನು ನೋಡಿಕೊಡುವುದಾಗ ಅದನ್ನ ತೆಗೆದುಕೊಂಡು ಬೇರೆಯದೇ ಒಂದನ್ನ ಕಳಿಸಿಕೊಟ್ಟ.
ಎಂದಿನಂತೆ ಮಕ್ಕಳು ತಿಂಡಿಗಾಗಿ ಕಲ್ಲು ಬೀಸುತ್ತಾರೆ, ಅಲ್ಲೇನಿದೆ!? ಧೂರ್ತ ರಾಜ ನ್ಯಾಯ ಕೇಳಲು ಬಂದ ಅಣ್ಣ ತಂಗಿಯನ್ನ ಗಡೀಪಾರು ಮಾಡಿಬಿಟ್ಟ.

ಸರಿ. ನಮ್ಮ ಕೆಂಪುಜುಟ್ಟಿನ ಹುಂಜ ಈಗ ಬೀದಿಗ ಬಂತು. ಬಂದು ಬೇಲಿಗಳ ಮೇಲೆ ನಿಂತು ಜೋರಾಗಿ ಕೂಗತೊಡಗಿತು. “ಕೊಕ್ಕೊಕ್ಕೋ ಕೊಕ್ಕೊಕ್ಕೋ… ಈ ದುಷ್ಟ ರಾಜ ಪಾಪದ ಬಡ ಮಕ್ಕಳಿಗೆ ಮೋಸ ಮಾಡಿ ಅವರ ಬೀಸೇಕಲ್ಲು ಕಿತ್ತುಕೊಂಡಿದ್ದಾನೆ…ಅಲ್ಲಿ ಆ ಪಾಪದ ಮಕ್ಕಳು ಉಪವಸವಿದ್ದರೆ, ಇವನಿಲ್ಲಿ ಬಗೆಬಗೆಯ ಭಕ್ಷ್ಯ ತಿನ್ನುತ್ತಿದ್ದಾನೆ! ನಾಚಿಕೆಗೇಡು, ನಾಚಿಕೆಗೇಡು!!”
ಕೆಂಪು ಜುಟ್ಟಿನ ಹುಂಜದ ಮಾತು ಕೇಳಿ ಜನರು ಆಶ್ಚರ್ಯ ಪಟ್ಟರು. ಗುಸುಗುಸು ಮಾಡುತ್ತ ಹುಂಜದ ಬಳಿ ಹೋಗಿ ಏನು ಎತ್ತ ತಿಳಿದುಕೊಂಡರು.
ಹೀಗೆ ಕೆಂಪುಜುಟ್ಟಿನ ಹುಂಜ ಗಲ್ಲಿ ಗಲ್ಲಿಯಲ್ಲಿ ಕೊಕ್ಕೊಕ್ಕೋ ಅನ್ನುತ್ತ ರಾಜನ ವಿರುದ್ಧ ಕೂಗುತ್ತ ಕೊನೆಗೆ ರಾಜ ಬೀದಿಗೂ ಬಂತು. ಅಲ್ಲಿ ರಾಣಿಯ ಅಂತಃ ಪುರದ ಕಿಟಕಿ ಮೇಲೆ ನಿಂತು, “ಕೊಕ್ಕೊಕ್ಕೋ… ಮಕ್ಕಳ ಕೈಯಿಂದ ಬೀಸೇಕಲ್ಲು ಕಿತ್ತುಕೊಂಡ ರಾಜನ ಹೆಂಡತಿಯೇ…” ಅನ್ನುತ್ತ ರಾಣಿಯನ್ನು ಛೇಡಿಸಿತು. ರಾಣಿಗೆ ನಾಚಿಕೆಯಾಗಿ ರಾಜನೊಟ್ಟಿಗೆ ಜಗಳವಾಡಿದಳು.
ಆ ಹೊತ್ತಿಗೆ ಜನಗಳೂ ರಾಜನ ಬಗ್ಗೆ ಮಂತ್ರಿಯ ಬಳಿ ವಿಚಾರಿಸತೊಡಗಿದ್ದರು. ಅತ್ತ ಕೆಂಪುಜುಟ್ಟಿನ ಹುಂಜ ಮಾತ್ರ ತನ್ನ ಪಾಡಿಗೆ ಕೂಗು ಮುಂದುವರಿಸಿತ್ತು.
ರೇಜಿಗೆ ಬಿದ್ದ ರಾಜ ಹುಂಜವನ್ನ ಹಿಡಿಸಿ ಸೆರೆಮನೆಗೆ ಹಾಕಿಸಿದ. ಅದು ಅಲ್ಲೂ ತನ್ನ ಕೆಲಸ ಮುಂದುವರೆಸಿತು.
ಈಗಂತು ರಾಜನ ತಲೆ ಕೆಟ್ಟುಹೋಯ್ತು. ಅದನ್ನ ಕೊಯ್ದು ಸಾರು ಮಾಡಿ ಬಡಿಸುವಂತೆ ಆಜ್ಞೆ ಮಾಡಿದ. ಅಡುಗೆಯವರು ಕೂಗುತ್ತಿದ್ದ ಹುಂಜವನ್ನ ಕೊಯ್ದು ಮಸಾಲೆ ಅರೆದು ಸಾರು ಮಾಡಿದರು.
ಈಗ ರಾಜನಿಗೆ ಸಂತ್ರುಪ್ತಿ. ಖುಶಿಖುಶಿಯಾಗಿ ತಾನೊಬ್ಬನೇ ಅಷ್ಟೂ ಸಾರು ಸುರಿದುಕೊಂಡು ತಿಂದುಬಿಟ್ಟ!
ಊಟ ಮಾಡಿ ಮಲಗುವ ಕೋಣೆಗೆ ಹೋದ ರಾಜನ ಹೊಟ್ಟೆಯಿಂದ ಮತ್ತೆ ಹುಂಜದ ಕೂಗು!
“ಕೊಕ್ಕೊಕ್ಕೋ! ದುಷ್ಟ ರಾಜ ಮಕ್ಕಳಿಂದ ಬೀಸೇಕಲ್ಲು ಕಿತ್ತುಕೊಂಡ. ಕೆಂಪು ಜುಟ್ಟಿನ ಹುಂಜ- ನನ್ನನ್ನು ಸೆರೆಮನೆಗೆ ತಳ್ಳಿದ. ಈಗ ಈ ದುಷ್ಟ ನನ್ನನ್ನು ಬೇಯಿಸಿ ತಿಂದಿದ್ದಾನೆ! ಅಲ್ಲಿ ಬಡ ಮಕ್ಕಳು ಉಪವಾಸ ಬಿದ್ದಿದ್ದರೆ, ಇಲ್ಲಿ ರಾಜ ತಿಂದು ತೇಗುತ್ತಿದ್ದಾನೆ!”
ಈಗಂತೂ ರಾಜನಿಗೆ ಬೊಗಸೆ ನೀರಲ್ಲಿ ಮುಳುಗಿ ಸಾಯುವಷ್ಟು ನಾಚಿಕೆಯಾಯ್ತು. ಅವನು ಹೋದಲ್ಲಿ ಬಂದಲ್ಲೆಲ್ಲ ಕೆಂಪುಜುಟ್ಟಿನ ಹುಂಜದ ಕೊಕ್ಕೊಕ್ಕೋ ನಡೆದೇ ಇತ್ತು! ಕೈಕೈ ಹಿಸುಕಿಕೊಂಡ ರಾಜ, ಅವಮಾನ ತಾಳಲಾರದೆ ತಿಂದಿದ್ದೆಲ್ಲ ಕಕ್ಕಿ ಕೊಂಡ. ಕೆಂಪುಜುಟ್ಟಿನ ಹುಂಜ ಇಡಿಇಡಿಯಾಗಿ ಹೊರಬಂದು ಅರಮನೆ ಬೇಲಿಯತ್ತ ಹಾರಿಹೋಯ್ತು. ಮತ್ತೆ ತನ್ನ ಕೂಗು ಮುಂದುವರೆಸಿತು.
ಈಗಂತೂ ರಾಣಿ ರಾಜನನ್ನ ತರಾಟೆಗೆ ತೆಗೆದುಕೊಂಡಳು. ಬೀಸೇಕಲ್ಲು ಕೊಟ್ಟುಬಿಡು ಅಂತ ಬುದ್ಧಿ ಹೇಳಿದಳು. ಕೊನೆಗೂ ರಾಜ ಕೆಂಪುಜುಟ್ಟಿನ ಹುಂಜದ ಕಾಟಕ್ಕೆ ಬೇಸತ್ತು ಆ ಮಕ್ಕಳನ್ನು ಕರೆಸಿದ. ಅವರ ಬೀಸೇಕಲ್ಲು ಅವರಿಗೆ ಮರಳಿಸಿದ.

ಆಮೇಲಿಂದ ಅಣ್ನ ತಂಗಿ ದಿನವೂ ಬೀಸೆಕಲ್ಲು ಬೀಸಿ ಬೀಸಿ ರುಚಿರುಚಿಯಾದ ತಿಂಡಿಗಳನ್ನು ಪಡೆಯುತ್ತ, ಬಡವರಿಗೆಲ್ಲ ಹಂಚುತ್ತ ನೂರು ವರ್ಷ ಸುಖವಾಗಿದ್ದರು.
ಕೆಂಪುಜುಟ್ಟಿನ ಹುಂಜವೂ ರಾಜನ ಪ್ರಾರ್ಥನೆಗೆ ಒಪ್ಪಿ ಮುಂದೆ ಯಾವತ್ತೂ ಅವನ ವಿರುದ್ಧ ಕೂಗಲಿಲ್ಲ. ತಾನೂ ತಿಂಡಿಯಲ್ಲಿ ಪಾಲು ಪಡೆದು ಅಣ್ಣ ತಂಗಿಯರೊಟ್ಟಿಗೆ ಸುಖವಾಗಿ ಇದ್ದುಬಿಟ್ಟಿತು!

February 18, 2008

ರಾಮಾಯಣ- ಮೂರು ಪ್ರಶ್ನೆಗಳು… 1. ವಾಲಿ ವಧೆಯ ಅಂತರಂಗ

Filed under: ಇತಿಹಾಸ — jeevadani @ 11:35 am

ರಾಮನನ್ನು ರಾಮಾಯಣವನ್ನು ಹಳಿಯುವವರಿಗೆ ಯಾವ ಬಗೆಯಿಂದ ಗೂಡಾರ್ಥಗಳನ್ನ ವಿಶ್ಲೇಷಿಸಿ ಹೇಳಿದರೂ ಸಮಾಧಾನವಾಗದು. ಅಂಥವರು ತಮ್ಮ ಕೆಲವು ವಾದಗಳಲ್ಲಿ ‘ಹಾಗೆ ನಡೆದಿದ್ದು’ ಹೌದೆಂದೂ, ಎಂಥಾ ಅನ್ಯಾಯವೆಂದೂ ಬೊಬ್ಬಿಟ್ಟರೆ, ಕೆಲವೆದೆ, ಇಡಿಯ ಕಾವ್ಯವೇ ಕಟ್ಟು ಕಥೆ ಅಂದು ಮೂಗು ಮುರಿಯುತ್ತಾರೆ.

ಆದರೆ ಮಹಾಕಾವ್ಯಗಳನ್ನು ಮೇಲಮೇಲಕ್ಕೆ ಓದಿ, ಅವುಗಳ ಬಗ್ಗೆ ಗೌರವವಿದ್ದೂ ಅರ್ಥೈಸಿಕೊಳ್ಳಲಾಗದೆ ಅನುಮಾನದ ಹುತ್ತ ಕಟ್ಟಿಕೊಂಡು ಒದ್ದಾಡುವ ಸಂಸ್ಕಾರವಂತರೂ ಇರುತ್ತಾರೆ. ಇಂಥವರು ರಾಮನಾಗಲೀ ಕೃಷ್ಣನಾಗಲೀ ಮಾಡಿದ್ದನ್ನು ಅನ್ಯಾಯವೆಂದು ಹೇಳಲಾರರು; ಪ್ರತಿವಾದಿಗಳಿಗೆ ಸಮರ್ಥ ಉತ್ತರ ನೀಡಿ ಸುಮ್ಮ್ಜನಿರಿಸಲೂ ಆರರು.
ನಾನು ಈ ಎರಡನೆ ಸಾಲಿಗೆ ಸೇರಿದ್ದು. ಹಾಗೆ, ಈ ಕಾವ್ಯಗಳ ಪಾತ್ರಗಳಿಗೆ ನನ್ನದೇ ಆದ ಬೇರೆಯೇ ಬಗೆಯ ಚಿಂತನೆಯನ್ನ ಆರೋಪಿಸಿ ಬರೆಯುವುದು ನನ್ನ ಹವ್ಯಾಸವಾದರೂ ಅಂತರಂಗದಲ್ಲಿ ’ನಿಜ’ವಾದ ಸತ್ತ್ವ ಏನು ಎಂಬ ಕುತೂಹಲ ನನ್ನದಿತ್ತು. ಈ ನಿಟ್ಟಿನಲ್ಲಿ ರಾಮಾಯಣದ ಮೂರು ಮುಖ್ಯ ಪ್ರಶ್ನೆಗಳಾದ “ರಾಮ ವಾಲಿಯನ್ನ ಮರೆಯಲ್ಲೇಕೆ ಕೊಂದ?”, ಸೀತಾ ಪರಿತ್ಯಾಗ ಸಮುಚಿತವೇ” ಮತ್ತು ಸಂಬೂಕ ವಧೆ ಎಷ್ಟು ಸರಿ?”- ಇವುಗಳ ಬೆನ್ನು ಹತ್ತಿ ಹೊರಟಿದ್ದೆ. ಕೊನೆಗೆ ಸಮಾಧಾನಕರ ಅಂಶ ಸಿಕ್ಕಿದ್ದು, ಶ್ರೀ ಮಧ್ವಾಚಾರ್ಯರ ಸರ್ವ ಮೂಲ ಗ್ರಂಥಗಳಲ್ಲಿ! ಅದನ್ನ ನೇರಾನೇರ ಓದಿಲ್ಲ ನಾನು. ಅದನ್ನೆಲ್ಲ ಕ್ರೋಢೀಕರಿಸಿ ಮಾಧ್ವ ಮಹಾ ಮಂಡಲದವರು ಮಾಡಿದ ಹೊತ್ತಗಿಯಲ್ಲಿ, ಶ್ರೀ ವಿಶ್ವೇಶ ತೀರ್ಥರ ಪ್ರಸ್ತಾವನೆಯಲ್ಲಿ ಸಿಕ್ಕಿದ್ದು!
ಅಲ್ಲಿ ನೀಡಿರುವ ಉತ್ತರಗಳನ್ನ ( ಶ್ರೀ ವಿಶ್ವೇಶ ತೀರ್ಥರು ಬರೆದಿರುವಂತೆ) ಇಲ್ಲಿ ಯಥಾವತ್ ನಿರೂಪಿಸಲಾಗಿದೆ.

ಶ್ರೀ ರಾಮ ವಾಲಿಯನ್ನು ನೆರವಾಗಿ ನಿಂತು ಬಾಣ ಪ್ರಯೋಗಿಸದೇ ಮರೆಯಲ್ಲಿ ನಿಂತು ವಾಲಿಯನ್ನು ಕೊಂದಿದ್ದು ಸರಿಯೇ?

ವಾಲ್ಮೀಕಿ ರಾಮಾಯಣದಲ್ಲಿ ಶ್ರೀ ರಾಮನು ವಾಲಿಯನ್ನು ಕೊಲ್ಲುವ ನಿರ್ಧಾರ ಮಾಡಿದ್ದರ ಕಾರಣಗಳನ್ನು ಸ್ಪಷ್ಟವಾಗಿ ಹೇಳಲಾಗಿದೆ. ರಾವಣ ಹೆಗೆ ಸೀತಾದೇವಿಯನ್ನು ಅಪಹರಿಸಿದ್ದನೋ ಹಾಗೆಯೇ ವಾಲಿ ಕೂಡ ಸುಗ್ರೀವನ ಹೆಂಡತಿಯ ಮೇಲೆ ಬಲಾತ್ಕಾರವೆಸಗಿ ತನ್ನ ವಶ ಮಾಡಿಕೊಂಡ. ಈ ನಿಟ್ಟಿನಲ್ಲಿ ವಾಲಿ ಕೂಡ ರಾವಣನ ಸಮಾನ ಅಪರಾಧಿ. ಇಂಥಹ ದುರ್ವರ್ತನೆ ತೋರಿದವನನ್ನು ನಿಗ್ರಹಿಸುವುದರಲ್ಲಿ ತಪ್ಪೇನಿದೆ? ಶಕ್ತಿ ಪರೀಕ್ಷೆಗಾಗಿ ನಡೆಸುವ ಯುದ್ಧಗಳಲ್ಲಿ ಕ್ರಿಕೆಟ್ ಮುಂತಾದ ಆಟಗಳಾ ನಿಯಮದಂತೆ ಯುದ್ಧ ನಿಯಮವನ್ನೂ ಚಾಚೂ ತಪ್ಪದೆ ಅನುಸರಿಸಬೇಕು. ಆದರೆ ದುಷ್ಟರನ್ನು, ಅಧಾರ್ಮಿಕರನ್ನು ಶಿಕ್ಷಿಸುವಾಗ ಈ ನಿಯಮಗಳನ್ನು ಅನುಸರಿಸುವ ಅವಶ್ಯಕತೆಯಿಲ್ಲ. ಕಳ್ಳರು, ದರೋಡೆಕಾರರು ಮತ್ತು ಭಯೋತ್ಪಾದಕರನ್ನು ಹಿಡಿಯಲು ಯಾವುದೇ ತಂತ್ರಗಳನ್ನು ಅನುಸರಿಸಿದರೂ ತಪ್ಪೆನ್ನಿಸುವುದಿಲ್ಲವಶ್ಟೆ? ಆದುದರಿಂದ ಅತ್ಯಾಚಾರಿಯಾದ ವಾಲಿಯನ್ನು ರಾಮನು ಮರೆಯಲ್ಲಿ ನಿಂತು ಕೊಂದುದರಲ್ಲಿ ಯಾವುದೇ ನೈತಿಕ ಅಪರಾಧವಿಲ್ಲ. ಈ ಸಮರ್ಥನೆಯನ್ನು ವಾಲ್ಮೀಕಿ ರಾಮಾಯಣದಲ್ಲಿ ನಾವು ನೋದಬಹುದು.
ಇದೇ ವಾಲ್ಮೀಕಿ ರಾಮಾಯಣದಲ್ಲಿ ಮತ್ತೂ ಒಂದು ವಿಶಯವನ್ನು ಗಮನಿಸಬೇಕು. ಅದು, ಧರಾಶಾಯಿಯಾದ ವಾಲಿ ಮತ್ತು ಶ್ರೀರಾಮರ ಚರ್ಚೆ. ರಾಮನೊಂದಿಗೆ ಚರ್ಚಿಸಿದ ವಾಲಿಗೆ ತನ್ನ ತಪ್ಪಿನ ಅರಿವಗಿ ಪಶ್ಚಾತ್ತಾಪ ಪಡುತ್ತಾನೆ. ಆಗ ರಾಮನು ಆತನಿಗೆ ಜೀವದಾನ ನೀಡಿ ಬದುಕಿಸಬಲ್ಲೆ ಎಂದು ಆಹ್ವಾನವಿತ್ತಾಗ, ವಾಲಿ ಅದನ್ನು ನಿರಾಕರಿಸಿ ರಾಮ ಸನ್ನಿಧಿಯಲ್ಲಿ ದಿವ್ಯ ಮರಣವನ್ನು ಅಪೇಕ್ಷಿಸುತ್ತಾ ಶಾಂತನಾಗಿಯೇ ಸಾವನ್ನು ಸ್ವೀಕರಿಸುತ್ತಾನೆ.

ನನಗನ್ನಿಸಿದ್ದು: ನಮಗೆ ರಾಮಾಯಣ ಗೊತ್ತಿರುವುದು ವಾಲ್ಮೀಕಿ ರಾಮಾಯಣದ ಮೂಲಕವೇ. ಆನಂತರದಲ್ಲಿ ಅನೇಕಾನೇಕ ಪ್ರಕ್ಷೇಪಗಳು ಬಂದು ಮೂಲ ರಾಮಾಯಣ ಯಾವುದೆಂದೇ ತಿಳಿಯದಾಗುವ ಪರಿಸ್ಥಿತಿ ಬಂದಿದೆ. ನಾವು ಬೇಕಿದರೆ ನಮ್ಮ ನಮ್ಮ ಚಿಂತನೆಯ ಮೂಲಕ ವಾಲ್ಮೀಕಿ ರಾಮಾಯಣದಿಂದ ಮೂಲ ಪಾತ್ರ ಸನ್ನಿವೇಶಗಳನ್ನು ತೆಗೆದುಕೊಂಡು ಹೊಸತನ್ನು ಹೆಣೆಯೋಣ. ಆದರೆ ಅವಕ್ಕೆ ನಾವು ‘ಇತಿಹಾಸ’ದ ಹಣೆಪಟ್ಟಿ ಕೊದಲಾಅಗ್ದು. ಅದು ಮೂರ್ಖತನ ಕೂಡ. ರಾಮನ ಬಗ್ಗೆ, ರಾಮಾಯಣದ ಬಗ್ಗೆ ಮಾತಾಡುವಾಗ ವಾಲ್ಮೀಕಿ ರಾಮಾಯಣವೊಂದೇ ಮೂಲ, ಪ್ರಮಾಣ. ಹೀಗಾಗಿ ರಾಮ ವಾಲಿಯನ್ನು ಕೊಂದ ಎಂದು ರಾಮಾಯಣದ ಆಧಾರದ ಮೇಲೆ ಹೇಳುವ ನಾವು, ಯಾಕೆ ಹಾಗೆ ಮಾಡಿದ ಎನ್ನುವುದಕ್ಕೂ ಅಲ್ಲಿಯೇ ಉತ್ತರವನ್ನು ಹುಡುಕಬೇಕಲ್ಲವೆ?

ಸೀತಾ ಪರಿತ್ಯಾಗದ ಪ್ರಶ್ನೆ, ಮುಂದಿನ ಕಂತಿನಲ್ಲಿ…

February 16, 2008

ಮಾರಿಷೆ ಮತ್ತು ಹತ್ತು ಮಂದಿ ಪ್ರಚೇತರು

Filed under: ಪುರಾಣ — jeevadani @ 9:19 am

ಭೂಮಿಯಲ್ಲಿ ಋಷಿಗಳು ತಪಸ್ಸಿಗೆ ಕುಳಿತರೆ ಸಾಕು, ಇಂದ್ರ ಸಿಂಹಾಸನಕ್ಕೆ ನಡುಕ! ಪ್ರತಿ ಬಾರಿಯೂ ಇಂಥದನ್ನು ತಡೆಯಲು ಆತ ತನ್ನ ಅಪ್ಸರೆಯರನ್ನು ಅವರತ್ತ ಕಳುಹಿಸಿ ತಪೋಭಂಗ ಮಾಡುತ್ತಿದ್ದ. ಈ ಬಗೆಯ ಕಥೆಗಳಲ್ಲಿ ವಿಶ್ವಾಮಿತ್ರನ ತಪೋಭಂಗದ ಕಥೆ ಅತಿ ಜನಪ್ರಿಯ. ಅಂಥದೇ ಇಲ್ಲಿ, ಮತ್ತೊಂದು…

ಹೀಗೊಬ್ಬನಿದ್ದ ಕಂಡು ಮಹರ್ಷಿ. ಆತನೂ ಒಮ್ಮೆ ತಪಸ್ಸಿಗೆ ಕುಂತ. ಹೆದರಿದ ಇಂದ್ರ ಪ್ರಮ್ಲೋಚೆ ಎಂಬ ಅಪ್ಸರೆಯನ್ನು ತಪಸ್ಸು ಕೆಡಿಸಲೆಂದೇ ಕಳಿಸಿಕೊಟ್ಟ. ಪ್ರಮ್ಲೋಚೆಯ ರೂಪ ಲಾವಣ್ಯ ಕಂಡು ಮುನಿಯನ್ನು ಸೆಳೆದವು. ಇಂದ್ರನ ತಂತ್ರ ನೆರವೆರಿತು, ಪ್ರಮ್ಲೋಚೆಯಲ್ಲಿ ಮುನಿಯ  ತಪೋಸಂಚಯ ನಷ್ಟವಾಯಿತು. ಇಂಥ ದಿವ್ಯ ವೀರ್ಯದಿಂದ ಅತ್ಯದ್ಭುತ ಲಾವಣ್ಯದ ಹೆಣ್ಣು ಶಿಶು ಜನಿಸಿತು. ಎಂದಿನಂತೆ ಅಪ್ಸರೆ ಮಗುವನ್ನು ಅಲ್ಲಿಯೇ ಬಿಟ್ಟು ಹೊರಟುಹೋದಳು. ಇತ್ತ ಕಂಡು ಮುನಿ, ತನ್ನ ಶಕ್ತಿಯನ್ನು ಪುನಃ ಸಂಪಾದಿಸಲು ತಪಸ್ಸಿಗೆ ಕುಂತುಬಿಟ್ಟ.

ತಂದೆ ತಾಯಿಯರ ಉಪೇಕ್ಷೆಗೆ ಒಳಗಾದ ಮಗು ಕಾಡಿನಲ್ಲಿ ಒಂಟಿಯಾಗಿ ಹಸಿವು, ಚಳಿ ಗಾಳಿಯಿಂದ ತತ್ತರಿಸಿ ಒಂದೇಸಮನೆ ಅಳತೊಡಗಿತು. ಈ ಮಗುವನ್ನು ಕಂಡ ಚಂದ್ರದೇವ ತನ್ನ ಅಮೃತ ಕಿರಣಗಳನ್ನು ಊಡಿ ಮಗುವನ್ನು ಸಾಂತ್ವನಗೊಳಿಸಿದ. ತನ್ನ ಆಜ್ಞಾಪಾಲಕರಾದ ವೃಕ್ಷದೇವತೆಗಳಿಗೆ ಮಗುವಿನ ಪೋಷಣೆಯ ಜವಾಬ್ದಾರಿ ಕೊಟ್ಟ. ಹೀಗೆ ಕಂಡು- ಪ್ರಮ್ಲೋಚೆಯರ ಮಗಳಾದ ‘ಮಾರಿಷೆ’ಯು ವನದೇವಿಯ ಮಡಿಲಲ್ಲಿ ಬೆಳೆಯತೊಡಗಿದಳು.

ಪ್ರಾಚೀನ ಬರ್ಹಿ ಎಂಬೊಬ್ಬ ರಾಜನದು ಬೇರೆಯೇ ಕಥೆ. ಅದಿನ್ನೂ ದೊಡ್ಡ ಕಥೆ. ಅವನ ಹತ್ತು ಮಕ್ಕಳ ಹೆಸರೂ ’ಪ್ರಚೇತ’ರೆಂದೇ. ಆ ಮಕ್ಕಳು ಕೂಡ ತಪೋಸಂಪನ್ನರು. ಬ್ರಹ್ಮನ ಆದೇಶದ ಮೇರೆಗೆ ಆ ಹತ್ತೂ ಸಹೋದರರು  ಮಾರಿಷೆಯನ್ನು ಮದುವೆಯಾದರು!
ಮುಂದೆ ಮಾರಿಷೆಯ ಗರ್ಭದಲ್ಲಿ ಪ್ರಚೇತರು ’ದಕ್ಷ’ನನ್ನು ಪಡೆದರು.  ದಕ್ಷ, ಭೂಲೋಕದಲ್ಲಿ ಮಾನವ ಸಂತಾನವನ್ನು ವ್ಯಾಪಕಗೊಳಿಸಿ, ’ಪ್ರಜಾಪತಿ’ ಅನಿಸಿಕೊಂಡನು.

ಈತ ಹಿಂದೆ ದಾಕ್ಷಾಯಣಿಯ ತಂದೆಯಾಗಿ, ಅವಳ ಆತ್ಮಾಹುತಿಗೆ ಕಾರಣನಾಗಿ ಶಿವನಿಂದ ದಂಡನೆಗೊಳಗಾಗಿದ್ದನಲ್ಲ, ಅದೇ ದಕ್ಷ. ಶಿವ ಶಾಪದಿಂದ ಮತ್ತೆ ಭೂಮಿಯಲ್ಲಿ ಹುಟ್ಟಿಬಂದ. ಶಪಿತನಾದರೂ ಆತ ಬ್ರಹ್ಮನ ಮಗನಲ್ಲವೇ? ಭೂಮಿಯಲ್ಲಿ ಹುಟ್ಟಲು ಆತನಿಗೆ ಸತ್ತ್ವಯುತ ಕ್ಷೇತ್ರವೇ ಆಗಬೇಕಿತ್ತು. ಅದಕ್ಕೆಂದೇ ಕಂಡು-ಪ್ರಮ್ಲೋಚೆಯರ ಪ್ರಹಸನವನ್ನು ನಿಯತಿ ಏರ್ಪಡಿಸಿದ್ದಳು!

ಮುಂದೆ ಹತ್ತು ಮಂದಿ ಪ್ರಚೇತರು ಮಾರಿಷೆಯಲ್ಲಿ ವೀರ್ಯ ಪ್ರತಿಷ್ಟಾಪಿಸಿ ದಕ್ಷನನ್ನು ಪಡೆದರು.

ಈ ಕಥೆ ಭಾಗವತ ಪುರಾಣದ ನಾಲ್ಕನೆ ಸ್ಕಂಧದಲ್ಲಿ ಬರುತ್ತದೆ.

Blog at WordPress.com.