ಜೀವ ದನಿ

January 26, 2008

ಉಪಾಧಿಗಳಿಂದ ಮುಕ್ತಿ!

Filed under: ಝೆನ್ — jeevadani @ 5:20 pm

ಕ್ಯೋಟೋ ರಾಜ್ಯಪಾಲನೊಬ್ಬನಿಗೆ ಒಮ್ಮೆ ಝೆನ್ ಮಹಾಗುರು ಕೆಯಿಚುವನ್ನು ಭೇಟಿ ಮಾಡುವ ಮನಸ್ಸಾಯಿತು. ತೊಫುಕು ದೇವಾಲಯದಲ್ಲಿ ಉಪದೇಶ ಮಾಡುತ್ತಿದ್ದ ಕೆಯಿಚುವಿಗೆ ಆತ ಹೊರಗಿನಿಂದ ತನ್ನ ಗುರುತಿನ ಚೀಟಿ ಕಳಿಸಿದ. ಅದರಲ್ಲಿ ಹೀಗೆ ಬರೆದಿತ್ತು; ಕಿಟಾಗಕಿ, ಕ್ಯೋಟೋ ರಾಜ್ಯಪಾಲ.
ಅದನ್ನೋದಿದ ಕೆಯಿಚು, “ಇವರೊಂದಿಗೆ ನನಗೇನು ಕೆಲಸ? ನಾನು ಇವರನ್ನ ಭೇಟಿಯಾಗೋದಿಲ್ಲ” ಎಂದು ಚೀಟಿಯನ್ನು ವಾಪಸು ಕಳಿಸಿಬಿಟ್ಟ.
ಸೇವಕ ತಲೆ ತಗ್ಗಿಸಿ ನಿಂತು ರಾಜ್ಯಪಾಲನಿಗೆ ವರದಿ ಒಪ್ಪಿಸಿದ. ಈಗ ಆತ ಚೀಟಿ ತೆಗೆದುಕೊಂಡು ’ಕ್ಯೋಟೋ ರಾಜ್ಯಪಾಲ’ ಎನ್ನುವ ಪದಗಳಿಗೆ ಕಾಟೂ ಹಾಕಿ ಮತ್ತೆ ಕಳಿಸಿಕೊಟ್ಟ.
ಸೇವಕ ನೀಡಿದ ಚೀಟಿಯನ್ನು ನೋಡಿದ ಮಹಾಗುರು, “ಓ, ನಾನು ಕಿಟಾಗಕಿಯೊಂದಿಗೆ ಮಾತನಾಡೋದಿದೆ. ಅವರನ್ನ ಬರಹೇಳು” ಅಂದ!

Blog at WordPress.com.