ಜೀವ ದನಿ

November 18, 2007

ಜಾನಕಿಗೊಂದು ಜಾದೂ ಕೀ ಜಪ್ಪಿ!!

Filed under: ಪಿಕ್ ಪಾಕೆಟ್ — jeevadani @ 6:32 am

-ಸುವ್ಯಕ್ತ

ಜೋಗೀ…….ನಾ ನಾ…..ಜಾನಕೀ…..!!

ಜಾನಕಿ ಅನ್ನೋ ಮೂರಕ್ಷರದ ಹೆಸರು ಮೂಡಿಸುವ ಭಾವ, ಹೆಜ್ಜೆಗುರುತಿಲ್ಲದ ಕಾಡಿನಲಿ ಹೆಸರಿಲ್ಲದ ಕವಿತೆಯ ಸಾಲೊಂದು ಕಾಡಿದಂತೆ. ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಬೇರೇನು ಇರುತ್ತೋ ಇಲ್ವೋ ಜಾನಕಿ ಕಾಲಂ ಮಾತ್ರ ಇರದಿದ್ದರೆ ಕೊಟ್ಟ ಹನ್ನೆರಡು ರೂಪಾಯಿ ಹುಂಡಿಗೆ ಹಾಕಿದ ಹಾಗಾಯಿತು ಅಂದುಕೊಳ್ಳುತ್ತಿದ್ದೆವು.

ಅತಿ ಸಾಮಾನ್ಯ ಓದುಗನ ಅಭಿವ್ಯಕ್ತಿಯಂತೆ ಶುರುವಾಗಿ ಗಾಢವಾದ ಅನುಭವ ಪ್ರಪಂಚವನ್ನು ಏನೂ ವಿಶೇಷ ಅಲ್ಲವೆಂಬಂತೆ ನಮ್ಮೆದುರಿಗೆ ತೆರೆದಿಡುತ್ತಿದ್ದ ಶೈಲಿಯೇ ಹೊಸತಾಗಿತ್ತು. ಅಲ್ಲಿವರೆಗೆ ವಿಮರ್ಶೆ, ಅರ್ಥವಾಗದ್ದನ್ನು ಅರ್ಥವಾಗದ ರೀತಿಯಲ್ಲಿ ತಮ್ಮ ಪಾಂಡಿತ್ಯ ಪ್ರದರ್ಶನಕ್ಕಾಗಿ ಬಳಸಿಕೊಳ್ಳುವ ಪ್ರಾಕಾರವಾಗಿ ಕಂಡಿತ್ತು. ವಿಮರ್ಶೆ ಓದುವುದಕ್ಕೇ ಹೆದರಿಕೆಯಾಗುತ್ತಿತ್ತು. ಈಗಲೂ ಅಷ್ಟೇ, ಎಷ್ಟೋ ವಿಮರ್ಶೆಗಳನ್ನು ಓದಿದರೆ ಗೊಂದಲವಾಗುತ್ತದೆ. ವಿಮರ್ಶೆಯನ್ನೂ ವಿಮರ್ಶಾ ದೃಷ್ಟಿಯಿಂದ ಪರಿಶೀಲಿಸಿ ಅರ್ಥ ಮಾಡಿಕೊಳ್ಳುವ ದೌರ್ಭಾಗ್ಯ ಓದುಗನದ್ದು. ಅಥವ, ವಿಮರ್ಶೆಗಳು ಸಾಮಾನ್ಯ ಓದುಗರಿಗಲ್ಲ!.

ಈಗಲೂ ಜಾನಕಿಯ ಬರಹಗಳನ್ನು ವಿಮರ್ಶೆಯೆಂದು ಸಾಹಿತ್ಯ ಪಂಡಿತರು ಒಪ್ಪದೇ ಇರಬಹುದು. ಒಂದು ರೀತಿಯಲ್ಲಿ ಅದು ನಿಜವೂ ಹೌದು. ಆದರೆ, ಸಾಹಿತ್ಯಾಸಕ್ತಿಯನ್ನು ಹುಟ್ಟುಹಾಕುವಲ್ಲಿ ಅವರ ಕೊಡುಗೆ ಯಾವುದೇ ವಿಮರ್ಶಕನಿಗಿಂತ ಹೆಚ್ಚು. ಕವಿತೆಗಿರಬೇಕಾದ ಲಯದ ಬಗ್ಗೆ, ಕತೆಗಳಿಗೆ ಬೇಕಾದ ಹೊಸತನದ ಬಗ್ಗೆ, ಹಳತನ್ನೇ ಬರೆಯುವ ಹೊಸ ಬರಹಗಾರರ ಬಗ್ಗೆ, ಹೊಸ ಚಿಂತನೆಗೆ ತೆರೆಯದ ಹಳೆಯ ಬರಹಗಾರರ ಬಗ್ಗೆ ಅಲ್ಲಿ ಪ್ರಕಟವಾಗುತ್ತಿದ್ದ ಮುಕ್ತ ಸರಳ ಅಭಿಪ್ರಾಯಗಳು ಯಾರದೋ ಘನತೆಯ ಪ್ರತಿಭೆಯ ಪರಿಮಾಣವನ್ನು ನಿಗದಿಪಡಿಸುವಂತದ್ದಲ್ಲ. ಒಂದು ಪುಸ್ತಕ ಓದಿದ ನಂತರ ಈಸೀ ಚೇರಿನಿಂದ ಎದ್ದು, ಮೈಮುರಿದು, ಅರಳಿರುವ ಹೂವನ್ನು ಮುಟ್ಟಿ ಸುಮ್ಮನೇ ಪ್ರೀತಿಸಿದಂತೆ. ಅನಿಸಿದ್ದನ್ನು ಸ್ನೇಹಿತನಿಗೆ ತಿಳಿಸಿದಂತೆ.

ಲೇಖನಗಳು, ಕತೆಗಳು, ಕಾದಂಬರಿ, ಸೀರಿಯಲ್ಲು, ಸಿನಿಮಾ, ಪತ್ರಿಕೆ, ಬ್ಲಾಗು ಯಾವುದೇ ಇರಬಹುದು…..ಜೋಗಿ ಅನ್ನುವುದಕ್ಕಿಂತ, ಒಂದೇ ಒಂದು ಕವಿತೆಯನ್ನೂ ಬರೆಯದೆ ಕವಿತೆಯ ಬಗ್ಗೆ ಬರೆಯುವ ಜಾನಕಿಯೇ ನಮಗಿಷ್ಟ. ಅವರೇ ಹೇಳುವಂತೆ- ‘ಕವಿತೆ ಬರೆಯದೆಯೇ ಕವಿಯಾಗಿ ಉಳಿಯುವುದು ಲೇಸು’. ಜಾನಕಿ ಒಂದು ಜೀವಂತ ಕವಿತೆಯಾಗುವುದು ಹೀಗೆ.

ಪ್ರಿಯರಾದವರ ಬಗ್ಗೆ ಬರೆಯಲು ಹೋದರೆ ಅಕ್ಷರಗಳು ಮಾಯವಾಗುತ್ತವೆ. ಟೀಕೆ-ಅಸಮಾಧಾನಗಳು ಮರೆತುಹೋಗುತ್ತವೆ. ಎಷ್ಟೇ ಬರೆದರೂ ಜಾನಕಿಯ ಬಗ್ಗೆ ನಮಗಿರುವ ಪ್ರೀತಿಯನ್ನು ಇನ್ನೂ ಪೂರ್ತಿಯಾಗಿ ಸಮರ್ಪಕವಾಗಿ ತಿಳಿಸಲು ಸಾಧ್ಯವಾಗಿಲ್ಲವೇನೋ ಅಂತ ಅನಿಸುತ್ತದೆ. ಆದರೂ ಅಷ್ಟಿಷ್ಟು ಅಕ್ಷರಗಳ ಮೂಲಕ ಈ ಪ್ರೀತಿ. ಇವರನ್ನು ನೀವು ಭೇಟಿಯಾದರೆ ಒಂದು ಅಚ್ಚರಿಯ ಅನುಭವ ನಿಮ್ಮನ್ನು ಮುತ್ತದೆ ಇರಲಾರದು. ಯಾಕೆಂದರೆ, ಜಾನಕಿ ಮಣ್ಣಿನಲ್ಲಿ ಹುಟ್ಟಿದ ಮಗಳು.

November 14, 2007

ಎಲ್ಲಿ ಜಾರಿತೋ….

Filed under: ಪಿಕ್ ಪಾಕೆಟ್ — jeevadani @ 2:40 pm

ಇದು, ಗೆಳೆಯ ಸುವ್ಯಕ್ತನ ಬರಹ ಸಂಗ್ರಹದಿಂದ ಕದ್ದಿದ್ದು. ನನಗೇನೋ ಖುಷಿ ಕೊಟ್ಟಿತು. ಅದಕ್ಕೇ ಈಗ ನಿಮ್ಮೆದುರಿಡುತ್ತಿದ್ದೇನೆ. ಓದಿ, ನೀವೂ ಖುಷಿ ಪಡಿ. ಅಂದಹಾಗೆ, ಈ ಬರಹದಲ್ಲಿನ ವಿಷಯ ಸಂಭ್ರಮಿಸುವಂತದ್ದಲ್ಲ ಮತ್ತೆ! ನಾನು ಹೇಳಿದ್ದು ಬರಹದ ಶೈಲಿಯ ಬಗ್ಗೆ. ಅದರೊಳಗಿನ ಹೂರಣ, ನಾವೆಲ್ಲರೂ ಒಮ್ಮೆ ಯೋಚಿಸುವಂತೆ ಮಾಡುತ್ತದೆ. ನಾವು ಹಾಗೆ ಯೋಚಿಸಿದಾಗಲೇ ಅದಕ್ಕೂ ಸಾರ್ಥಕತೆ. ಅಲ್ಲವೇ?

 ಎಲ್ಲಿ ಜಾರಿತೋ….

ಸಿಡಿಲಿಗೆ ಕಂಗಾಲಾದ ಹೊಂಬಾಳೆಯಂತಿದ್ದಳು ಅವಳು…..

ಕೋಮಲಾಂಗಿ ಅನ್ನುವುದರ ಕಲ್ಪನೆ ನನ್ನಲ್ಲಿ ಮೂಡಿದ್ದೇ ಅವಳನ್ನು ಕಂಡ ಮೇಲೆ. ಆಗ ಅವಳು ಅಷ್ಟು ಪ್ರಸಿದ್ಧಳಾಗಿರಲಿಲ್ಲ. ನನಗಿನ್ನು ಸರಿಯಾಗಿ ಮೀಸೆ ಮೂಡಿರಲಿಲ್ಲ. ಟಿ.ವಿ ಟ್ರೈಲರ್ನಲ್ಲಿ ಅವಳ ಹೆಸರು ನೋಡಿದೆ. ಆ ಸಿನಿಮಾ ಬಂದದ್ದೂ ಗೊತ್ತಿಲ್ಲ ಹೋಗಿದ್ದೂ ಗೊತ್ತಿಲ್ಲ. ಅದು ಯಾವ ಸಿನಿಮಾದ ಟ್ರೈಲರ್ ಅನ್ನುವುದೂ ನೆನಪಿಲ್ಲ. ಯಾರೂ ಕ್ಯಾರೇ ಎನ್ನದ ಅವಳು, ನನ್ನ ಕನಸಿನಕನ್ಯೆ. ನೋಡೋಣವೆಂದರೆ ಪೇಪರಿನಲ್ಲಿ ಅವಳ ಫೋಟೋ ಕೂಡ ಹೆಚ್ಚಾಗಿ ಸಿಗುತ್ತಿರಲಿಲ್ಲ.

ಆಕೆಯನ್ನು ಮೊದಲ ಬಾರಿ ಕಂಡ, ಕಂಡು ಬಾಯಿ ತೆರೆದುಕೊಂಡು ಕಲ್ಲಾಗಿ ನಿಂತ ಆ ಕ್ಷಣದ ಚಿತ್ರ, ಸ್ಮರಣೆಯಲ್ಲಿ ಎಲ್ಲಾ ಬಣ್ಣಗಳ ಜೊತೆಯಲ್ಲಿ ಅಚ್ಚಾಗಿ ಉಳಿದಿದೆ. ಮುದ್ದು ಮುಖ, ಮುಗ್ಧ ಕಂಗಳು, ಗುಲಾಬಿ ಎಸಳಿನ ತುಟಿಗಳು, ನೇರ ತೀಡಿದ ಮೂಗು, ಹಾಲಿಗಿಂತಲೂ ಬಿಳುಪಾದ, ರೇಶಿಮೆಗಿಂತಲೂ ನುಣುಪಾದ ದೇಹ. ಕಡುಗೆಂಪು ಗುಲಾಬಿ ಬಣ್ಣದ ಸೀರೆ. ಸೀರೆಯ ಮರೆಯಲ್ಲಿ ಬರೀ ಗುಲಾಬಿ ಮೊಗ್ಗುಗಳೇ ಕೂಡಿಕೊಂಡು ಹೆಣೆದ ಲೋಕವನ್ನೇ ಕಂಗಾಲುಗೊಳಿಸಬಲ್ಲ ಹರೆಯ. ಮೊದಲೇ ಹೇಳಿದಂತೆ, ನನ್ನಲ್ಲಿ ಕೋಮಲಾಂಗಿ ಎನ್ನುವ ಕಲ್ಪನೆ/ಶಬ್ದ/ಅರ್ಥ ರೂಪುಗೊಂಡು, ಅದು ಇವಳೇ ಸರಿ ಅಂತ ಅನಿಸಿದ ಗಳಿಗೆ ಅದು. ನನಗೆ ನಯಾ ಪೈಸೆಯ ಲಾಭ ಇರದಿದ್ದರೂ ಇಷ್ಟು ಮುದ್ದಾದ ಮುಖದ ಇವಳನ್ನು ಅವಕಾಶ, ಅದೃಷ್ಟ, ಗೆಲುವು ಅರಸಿ ಬರಲಿ; ಇನ್ನಷ್ಟು ಮಿಂಚಲಿ ಅಂತ ಆಸೆ ಪಟ್ಟಿದ್ದೆ. ಅವಳ ಸಿನಿಮಾಗಳು ಹಿಟ್ ಆಗಲಿಲ್ಲ.

ಯಾಕೋ ಗೊತ್ತಿಲ್ಲ, ಮೊನ್ನೆ ಪೇಪರಿನಲ್ಲಿ ಅವಳ ಕಂಗಳನ್ನು ಕಂಡ ಮೇಲೆ ಏನೋ ಒಂದು ರೀತಿಯ ಚಡಪಡಿಕೆ. ದೇಶದ್ರೋಹಿಗಳೊಡನೆ ದೇಶ ಬಿಟ್ಟು ಓಡಿಹೋದವಳು, ಇಂತವರಿಗೆಲ್ಲ ಏನ್ರೀ ಅನುಕಂಪ. ಸಿಕ್ಕಾಪಟ್ಟೆ ದುಡ್ಡಿರುತ್ತೆ. ಈಗ ಇನ್ನೊಂದಿಷ್ಟು ಹೆಸರು ಬಂದಿದೆ. ಸೀರಿಯಲ್ಲು, ಬ್ಯೂಟಿ ಪಾರ್ಲರ್, ಅದೂ ಇದೂ ಅಂತ ಇನ್ನಷ್ಟು ಮೆರೀತಾರೆ. ಅವರಿಗೇನು ಪಶ್ಚಾತ್ತಾಪ ಇರುತ್ತೆ ಅಂದ್ಕೊಂಡಿದೀರಾ? - ಅಂತ ನಿಮ್ಮಂತೆ ನನಗೂ ಸಿಟ್ಟು ಬರುತ್ತದೆ. ಆದರೆ, ಅವತ್ತೇಕೋ ಅವಳ ಮುಖದಲ್ಲಿ ದೈನ್ಯತೆ ಇತ್ತು. ತಪ್ಪು ಮಾಡಿಬಿಟ್ಟೆ ಅನ್ನುವ ಭಾವವಿತ್ತು. ಹೀಗೆಲ್ಲ ಭಾವಿಸುವಂತೆ ನನ್ನೆದೆಯಲ್ಲಿ ಪ್ರೀತಿಯಿತ್ತು. ಯಾಕೋ, ‘ಸಾಯ್ಲಿ ಮುಂಡೆವು’ ಅಂತ ಮರೆಯುವುದಕ್ಕೆ ಸಾಧ್ಯವಾಗುತ್ತಿಲ್ಲ.

ಅವಳು ನನ್ನ ಪ್ರೀತಿಯ ಹೊಂಬಾಳೆ- ಮೋನಿಕಾ ಬೇಡಿ!.

29monika.jpg

ಆ ನಟಿ ಆತ್ಮಹತ್ಗೆ ಪ್ರಯತ್ನಿಸಿದಳು, ಮತ್ತೊಬ್ಬಳು ಭೂಗತಳಾದಳು, ಇವಳಂತೂ ತೀರ ಕಾಲ್ ಗರ್ಲ್ ಆಗಿಹೋದಳು…ಈ ಸುದ್ದಿಗಳನ್ನೆಲ್ಲ ಕೇಳಿದಾಗ ನಿಮಗೇನನಿಸುತ್ತೋ ಗೊತ್ತಿಲ್ಲ. ನನಗಂತು ಕರುಳು ಹಿಂಡಿದ ಹಾಗಾಗುತ್ತೆ.

ಈ ಮುದ್ದಾದ ಹುಡುಗಿಯರಿಗೆಲ್ಲ ಅದೇನು ರೋಗ ಬಂದಿರುತ್ತೋ ಗೊತ್ತಿಲ್ಲ. ಸುಮಾರು ಎರಡು ವರ್ಷದ ಹಿಂದೆ ನಮ್ಮೂರಿನಲ್ಲೂ ಹೀಗೇ ಆಗಿತ್ತು. ಇಡೀ ಊರಿನಲ್ಲಿ ಹಾರ್ಟ್ ಆಪರೇಶನ್ ಮಾಡಬಲ್ಲ ಏಕೈಕ ಡಾಕ್ಟರ್ ಶಾರದಾಪ್ರಸದ್. ಅವರ ಮುದ್ದಿನ ಮಗಳು ಮುದ್ದಾದ ಪ್ರಾರ್ಥನಾ ಕಣ್ಮರೆಯಾದಳು. ಆಟೋ ಡ್ರೈವರ್ ಶಿವನ ಜೊತೆ ಓಡಿಹೋಗಿದ್ದಾಳೆ ಅಂತ ನನಗೂ ಅವರಿವರಿಂದ ಕೇಳಿ ಗೊತ್ತು. ಓಡಿಹೋಗಿದ್ದನ್ನು ನಾನೇನು ಕಣ್ಣಾರೆ ನೋಡಿರಲಿಲ್ಲ ಎನ್ನಿ. ಆದರೂ, ಊರಿನವರ ಮಾತಿನಲ್ಲಿ ನಂಬಿಕೆ ಇಟ್ಟು ಈ ಗುಟ್ಟನ್ನು ನಿಮಗೆ ಹೇಳುತ್ತಿದ್ದೇನೆ.

ಪ್ರಾರ್ಥನ ನಮ್ಮ ಮನೆ ರಸ್ತೆಯಲ್ಲಿ ತಲೆ ಬಗ್ಗಿಸಿಕೊಂಡು ನಡೆದು ಕಾಲೇಜಿಗೆ ಹೋಗುವಾಗ ಅಕ್ಕಪಕ್ಕ ಮನೆಯವರು ಯಾರೂ ಇಲ್ಲದಾಗ ಅವಳನ್ನು ಕಣ್ತುಂಬ ನೋಡುತ್ತಿದ್ದೆ. ಅವಳು ಆಟೋ ಶಿವನೊಂದಿಗೆ ಓಡಿಹೋದಳು ಅನ್ನುವುದನ್ನು ಕೇಳಿ ನನಗೆ ಮೈಯೆಲ್ಲ ಉರಿದುಹೋಗಿತ್ತು. ಓಡಿಹೋಗಿ ಎರಡು ತಿಂಗಳ ನಂತರ ಅವಳು ಹಿಂದಿರುಗಿ ಬಂದದ್ದು ಊರವರಿಗೆಲ್ಲ ಮತ್ತೂ ದೊಡ್ಡ ಸುದ್ದಿ. ನಮ್ಮ ಮನೆಯಲ್ಲು ಆ ವಿಚಾರ ಎತ್ತುತ್ತಿದ್ದರು. ಆಗೆಲ್ಲ ನಾನು ‘ಆ ತಲೆಬಿಸಿ ನಮಗ್ಯಾಕೆ?’ ಅಂತ ಜೋರಿನಲ್ಲಿ ಹೇಳಿ ಅಲ್ಲಿಗೇ ನಿಲ್ಲಿಸುತ್ತಿದ್ದೆ. ರಾಘವೇಂದ್ರನ ಟೀ ಅಂಗಡಿಯಲ್ಲಿ, ರಫೀಕನ ಸೈಕಲ್ ಶಾಪಿನಲ್ಲಿ, ದಿನಸಿ ಅಂಗಡಿ ದಿನೇಶನ ಬಾಯಲ್ಲಿ, ಎಲ್ಲರ ಬಾಯಲ್ಲೂ ಅವಳ ಬಗ್ಗೆಯೇ ಮಾತು. ಓಡಿಸಿಕೊಂಡು ಹೋದ ಆ ಪುಣ್ಯಾತ್ಮ ಶಿವ ಈಗ ಯಾವ ಕೈಲಾಸದಲ್ಲಿದ್ದಾನೋ ಯಾರಿಗೂ ಗೊತ್ತಿಲ್ಲ (ಅವನು ಅವಳನ್ನು ಓಡಿಸಿಕೊಂಡು ಹೋದನೋ, ಅವಳು ಅವನನ್ನು ಓಡಿಕೊಂಡು ಹೋದಳೋ, ಇಬ್ಬರೂ ಒಬ್ಬರನ್ನೊಬ್ಬರು ಓಡಿಸಿಕೊಂಡು ಹೋದರೋ…..ಸರಿಯಾದ ಮಾಹಿತಿ ಇಲ್ಲ) . ಅವನ ವಿಷಯ ನೆನಪಾದಾಗ ಪ್ರಾರ್ಥನಳ ವಿಷಯ ಬಂದಾಗೆಲ್ಲ ಎಲ್ಲರಲ್ಲೂ ಅವನ ಬಗ್ಗೆ ಮೂಡುತ್ತಿದ್ದ ಏಕಾಭಿಪ್ರಾಯ ಎಂದರೆ- ‘ಒಳ್ಳೆ ಮಜಾ ಮಾಡ್ದ ಬಡ್ಡೀಮಗ…’. ಇನ್ನು ಅವಳ ಬಗ್ಗೆ- ‘ಓಡಿ ಹೋದ್ಳಲ್ಲ, ಆಗ ಜ್ಞಾನ ಇರ್ಲಿಲ್ವಾ? ……ಉಪ್ಪು ತಿಂದ ಮೇಲೆ….ಹಾಂಗೆ ಆಗ್ಬೇಕು….’. ಈ ಮಾತುಗಳಿಗೆಲ್ಲ ನನ್ನಲ್ಲೊಂದು ತಿರಸ್ಕಾರ ಬೆಳೆದಿತ್ತು.

ಮೊದಲೇ ತಲೆ ಬಗ್ಗಿಸಿಕೊಂಡು ನಡೆಯುತ್ತಿದ್ದ ಹುಡುಗಿ ಅವಳು. ಇಷ್ಟೆಲ್ಲ ಆದಮೇಲೆ ಊರಿನವರ ಮುಂದೆ ತಲೆ ಎತ್ತಿದ್ದೇ ಇಲ್ಲ.  ಆಮೇಲೆ ಕಾಲೇಜಿಗೂ ಹೋಗಲಿಲ್ಲ. ಮನೆಯಿಂದ ಹೊರಗೂ ಹೆಚ್ಚಾಗಿ ಬರುತ್ತಿರಲಿಲ್ಲ. ಆಟೋ ಶಿವ ಅವಳನ್ನು ಬಳಸಿಕೊಂಡಿರಬಹುದು, ಊರಿನವರು ಹೇಳುವಂತೆ ಮಜಾ ಕೂಡ ಮಾಡಿರಬಹುದು, ಇದ್ದಕ್ಕಿದ್ದಂತೆ ಕಾಣೆಯಾಗಿ ಅವಳೊಬ್ಬಳನ್ನೇ ಬಿಟ್ಟುಹೋಗಿ ಬಹಳ ಕೀಳಾಗಿ ನಡೆಸಿಕೊಂಡಿರಬಹುದು. ಆದರೆ, ಆ ಚೌತಿ ಹಬ್ಬದಂದು ಗಣಪತಿ ದೇವಸ್ಥಾನಕ್ಕೆ ಅವಳು ಬಂದಾಗ, ಹುಡುಗರು ಮೈಯನ್ನೆಲ್ಲ ಕಣ್ಣು ಮಾಡಿಕೊಂಡು ಅವಳನ್ನು ನಿಜವಾಗಿಯೂ ಸಾರ್ವಜನಿಕವಾಗಿ ಸಾಮೂಹಿಕ ಬಲಾತ್ಕಾರ ಮಾಡಿಬಿಟ್ಟರು. ಇವರ ಜೊತೆ ಏನಾದರು ಅವಳು ಓಡಿಹೋಗಿದ್ದರೆ ಆಟೋ ಶಿವನಿಗಿಂತ ಕೀಳಾಗಿ ನಡೆಸಿಕೊಳ್ಳುತ್ತಿದ್ದರೋ ಏನೋ!.

ಹೀಗೆ ಊರಿಗೊಂದು ಕತೆಯಾಗಿದ್ದ ಪ್ರಾರ್ಥನಳಿಗೆ ಮದುವೆ ಆಯ್ತು ಅಂತ ಹೋದ ವರ್ಷ ಕೇಳಿದೆ. ಮುಂಬೈ ಕಡೆಯ ಹುಡುಗನಂತೆ. ಸಂಬಂಧಿಕನಲ್ಲ, ಪರಿಚಯಸ್ಥನೂ ಅಲ್ಲ. ಡಾಕ್ಟರ್ ಶಾರದಾಪ್ರಸಾದರ ಯಾರೋ ಮುಂಬೈ ಡಾಕ್ಟರ್ ಗೆಳೆಯನ ಮೂಲಕ ಇತ್ಯರ್ಥವಾದ ಸಂಬಂಧ. ಮದುವೆಯನ್ನೂ ಮುಂಬೈನಲ್ಲೇ ಮಾಡಿದರಂತೆ. ನಮ್ಮೂರಿನ ಯಾರಿಗೂ ಹೇಳಿಕೆ ಬರಲಿಲ್ಲ. ತೀರ ಹತ್ತಿರದ ಸಂಬಂಧಿಕರನ್ನು ಮಾತ್ರ ಕರೆದಿದ್ದರಂತೆ. ಮದುವೆ ಮುಗಿದು ಮಗಳನ್ನು ಬಿಟ್ಟು ಬರುವವರೆಗೆ ಸಂಬಂಧಿಕರಿಗೆ ಹುಡುಗನೊಟ್ಟಿಗೆ ಹೆಚ್ಚಿಗೆ ಮಾತಾಡುವ ಅವಕಾಶ ಸಿಗದಂತೆ ಕಾಯುತ್ತಿದ್ದರಂತೆ. ಮನೆಯ ಒಬ್ಬರಲ್ಲ ಒಬ್ಬರು ಹುಡುಗನೊಂದಿಗೆ ಇದ್ದೇ ಇರುತ್ತಿದ್ದರಂತೆ. ಈಗ ಸುಖವಾಗಿ ಸಂಸಾರ ಮಾಡಿಕೊಂಡಿದ್ದಾರೆ. ಒಂದು ಮಗುವೂ ಆಗಿದೆ ಅಂತ ಅಮ್ಮ ಹೇಳಿದಳು. ನನಗೇನೋ ಒಂದು ರೀತಿಯ ಸಮಾಧಾನ.

ಮೋನಿಕಾ ಬೇಡಿ ಸಿನಿಮಾದಲ್ಲಿ ನಟಿಸುತ್ತಾಳಂತೆ ಎನ್ನುವ ಸುದ್ದಿ ಬಂದಿದೆ. ಏನೂ ನಡದೇ ಇಲ್ಲವೇನೋ ಅನ್ನುವ ಹಾಗಿತ್ತು ಅವಳ ನಿಲುವು. ತಾನು ಅಬು ಸಲೇಮನನ್ನು ಮದುವೆ ಆಗಿರಲಿಲ್ಲ ಅಂದಿದ್ದಾಳೆ. ಹೀಗೆ ಹೇಳಿದ ಉದ್ದೇಶ ಮುಂದೆ ಸಂಗಾತಿಯೊಬ್ಬ ಸಿಗಬಹುದೆಂಬ ನಿರೀಕ್ಷೆಯಾ? ಅವನ ಕೃತ್ಯಗಳಿಂದಾಗಿ ತನಗೆ ಬರಬಹುದಾದ ಅಪಾಯದಿಂದ ತಪ್ಪಿಸಿಕೊಳ್ಳುವ ಉಪಾಯವಾ? ನಿಕೃಷ್ಟವೆನಿಸಿದ ಸಂಬಂಧ ಒಂದರಿಂದ ಕಳಚಿಕೊಂಡಿದ್ದೀನಿ ಎನ್ನುವ ಸೂಚನೆಯಾ? ಅದೊಂದು ತಪ್ಪು ಹೆಜ್ಜೆ ಅವನೊಬ್ಬ ತಪ್ಪು ಆಯ್ಕೆ ಅಥವ ನನಗೆ ಆಯ್ಕೆ ಎಂಬುದೇ ಇರಲಿಲ್ಲವೆಂದು ಹೇಳಿ ಅವನೆದುರು ಹಾರಿಸಿದ ಧಿಕ್ಕಾರದ ಭಾವುಟವಾ?

ಏನೋ….ಅವರಿವರು ಹೇಳಿದ್ದನ್ನೆಲ್ಲ ಕೇಳಿ ಹಾಗೇ ಹೀಗೇ ಅಂತ ಮಾತಾಡುವುದಷ್ಟೆ ನಾವು-ನೀವು. ನಮ್ಮ ಮಾತಿನ ಬಲೆಯಲ್ಲೇ ನರಳದೆ, ಗಿಡುಗನ ಕೈಗೆ ಸಿಕ್ಕಿ ನಲುಗಿದ ಗುಬ್ಬಚ್ಚಿಗಳೆಲ್ಲ ಅವರವರ ಗೂಡು ಸೇರಿಕೊಳ್ಳಲಿ. ಗಿಡುಗನಂತಹ ಹೆಣ್ಣನ್ನು ನೀವು ಕಂಡಿದ್ದೀರಾ? ನಾನಂತೂ ಕಂಡಿಲ್ಲ. ಇದ್ದರೆ, ಹಾಳಾಗಿಹೋಗಲಿ ಬಿಡಿ.

September 25, 2007

ಹಾಗೆ ದೇವರಿದ್ದಾನೆ ಅಂತ ವೈಜ್ಞಾನಿಕವಾಗಿ ಸಾಧಿಸಿದವ ಯಾರು ಗೊತ್ತಾ?

Filed under: ಪಿಕ್ ಪಾಕೆಟ್ — jeevadani @ 5:45 pm

ನಾನು ತುಂಬಾ ಇಷ್ಟಪಟ್ಟ ಸಂಭಷಣೆ ಇದು.ವಿದ್ಯಾರ್ಥಿ ಮತ್ತು  ಶಿಕ್ಷಕನ ನಡುವಿನದ್ದು. ವಿದ್ಯಾರ್ಥಿ ಬಲು ಚುರುಕು. ಶ್ರದ್ಧಾವಂತ. ಆದರೆ ಶಿಕ್ಷಕ ಒಬ್ಬ ತರ್ಕ ಪಂಡಿತ. ಹೀಗಾಗಿ ನಾಸ್ತಿಕ.  ಆತ ದೇವರಿಲ್ಲ ಅಂತ ವಾದಿಸೋದನ್ನೇ - ನಂಬಿಸೋದನ್ನೇ ವೃತ್ತಿಯಾಗಿಸ್ಕೊಂಡಿದ್ದ.

ಅದೊಮ್ಮೆ ತರಗತಿಯಲ್ಲಿ ಬಿರುಸಿನ ಚರ್ಚೆ. “ನೀನು ದೇವರನ್ನು ನಂಬ್ತೀಯಾ?” ಕೇಳಿದ. ” ಖಂಡಿತವಾಗಿಯೂ” ವಿದ್ಯಾರ್ಥಿಯ ಉತ್ತರ. ” ದೇವರು ಒಳ್ಳೆಯವನಾ? ಶಕ್ತಿವಂತನಾ?” ಮತ್ತೊಂದು ಪ್ರಶ್ನೆ. ” ಹೌದು” ಬಾಲಕನ ಮುಗ್ಧ ವಾಗಿ ತಲೆಯಾಡಿಸಿದ.

ಶಿಕ್ಷಕ ತನ್ನ ವರಸೆ ತೆಗೆದ. ” ನನ್ನ ಸಹೋದರನಿಗೆ ಕ್ಯಾನ್ಸರ್ ಬಂದಿತ್ತು. ಆತ ದೇವರನ್ನು ಪ್ರಾರ್ಥಿಸಿದ. ನಮ್ಮಲ್ಲಿ ಬಹಳಷ್ಟು ಜನ ಹುಷಾರಿಲ್ಲದವರಿಗೆ ಸಹಾಯ ಮಾಡುತ್ತೇನಲ್ವೇ? ಆದರೆ ಆ ದೇವರು ಮಾಡಲಿಲ್ಲ. ಹಾಗಿದ್ದ ಮೇಲೆ ಆತ ದೇವರು ಹೇಗೆ?ಈ ಪ್ರಶ್ನೆಗೆ ಏನುತ್ತರ ಕೊಡ್ತೀರಿ?” ಆ ಹುಡುಗ ಶಾಂತವಾಗಿಯೇ ಇದ್ದ. ಮತ್ತೆ ಅವನೇ ಮುಂದುವರೆಸಿದ. “ಉತ್ತರ ಇಲ್ವಲ್ಲಾ? ಹೋಗಲಿ, ಈಗ ಹೇಳಿ. ರಾಕ್ಷಸರು ಒಳ್ಳೆಯವರಾ? ಕೆಟ್ಟವರಾ?”  ಹುಡುಗಿಯೊಬ್ಬಳು ನಿಂತು, ’ಕೆಟ್ಟವರು’  ಅಂದಳು. ಮುಖದಲ್ಲಿ ಸರಿ ಉತ್ತರ ಹೇಳಿದ ಹೆಮ್ಮೆ.  ’ ಹಾಗಾದರೆ ಅವರು ಬಂದಿದ್ದೆಲ್ಲಿಂದ?’ ಚಾಲಾಕಿ ಶಿಕ್ಷಕನ ಪ್ರಶ್ನೆ. ಈ ಪ್ರಶ್ನೆಗೂ ಅದೇ ಬಾಲಕಿ ಎದ್ದು ನಿಂತು, ’ದೇವರಿಂದ’ ಅಂದಳು.

ಮತ್ತೆ ಶಿಕ್ಷಕನ ಸರದಿ. ” ದುಷ್ಟ ಶಕ್ತಿ ಎಲ್ಲೆಲ್ಲೂ ಇದೆ, ಮತ್ತು ಅದನ್ನು ದೇವರೇ ಸೃಷ್ಟಿಸ್ತಾನೆ. ಅಂದ ಮೇಲೆ ದುಷ್ಟ ಶಕ್ತಿಯ ಒಡೆಯನೂ ಅವನೇ ಅಲ್ವೇ?”

ಇದಿಯ ತರಗತಿ ಸ್ತಬ್ಧವಾಯ್ತು.ಶಿಕ್ಷಕರು ಮುಂದುವರೆಸ್ತಾ ಚಿಕ್ಕ ಭಾಷಣವನ್ನೇ ಮಾಡಿದರು. ಅನಾರೋಗ್ಯ,ಅಪ್ರಮಾಣಿಕತೆ, ದ್ವೆಷ, ಕುರೂಪಿತನ, ಇವೆಲ್ಲ ರೋಗಿಷ್ಟ ಅಂಶಗಳು ಸಮಾಜದಲ್ಲಿ ಇವೆಯಲ್ಲವೇ? ಇವೆಲ್ಲದರ ಕಾರಣಕರ್ತನೂ ಭಗವಂತನೇ ಅಲ್ವೇ?

ಊಹೂಂ… ಯಾರೊಬ್ಬರಿಂದಲೂ ಉತ್ತರವಿಲ್ಲ. ಭಾಷಣ ಮುಂದುವರೆಯಿತು. ” ವಿಜ್ಞಾನ ಹೇಳುವಮ್ತೆ ಸುತ್ತಲಿನ ಆಗುಹೋಗುಗಳನ್ನು ಅರಿಯಲು ಐದು ಇಂದ್ರಿಯಗಳಿವೆ. ಆ ಇಂದ್ರಿಯಗಳ ಅರಿವಿಗೆ ಬಾರದಿದ್ದದ್ದು ಸತ್ಯವಲ್ಲ. ಈಗ ಹೇಳಿ. ನೀವು ದೇವರನ್ನು ನೋಡಿದ್ದೀರಾ? ಅವನ ಮಾತು ಕೆಳಿದ್ದೀರಾ? ಅವನ ನ್ನು ಮುಟ್ಟಿದ್ದೀರಾ? ಮೂಸಿದ್ದೀರಾ? ನೆಕ್ಕಿರ್ುಚಿ ನೋಡಿದ್ದೀರಾ!?ಶಿಕ್ಷಕನ ದನಿ ಏರುತ್ತ ಹೋಯ್ತು. ಹುಡುಗರುಮ ಮಿಸುಕಾಡಲಿಲ್ಲ.  ಕೊನೆಗೆ ತಾನೇ, ” ವಿಜ್ಞಾನದ ಯಾವ ವಿಧಿ-ವಿಧಾನವೂ ದೆವರ ಇರುವಿಕೆ ಸಾಬೀತುಪಡಿಸುವುದಿಲ್ಲವಾದ್ದರಿಂದ, ದೇವರು ಇರುವುದು ಸಾಧ್ಯವೇ ಇಲ್ಲ!” ಎಂದು ಷರಾ ಬರೆದುಬಿಟ್ಟ.

 ಒಂದರೆ ಕ್ಷಣ ಮೌನ. ಹಿಂದಿನ ಸಾಲಲ್ಲಿ ಕುಳಿತಿದ್ದ ಹುಡುಗ ಮೆಲ್ಲನೆ ಎದ್ದು ನಿಂತು, “ಸಾರ್” ಅಂದ. ಇಡೀ ತರಗತಿ ಅವನತ್ತ ತಿರುಗಿತು. ಹುಡುಗ ಕಣ್ಣಗಲಿಸಿ, ” ಸರ್, ಬಿಸಿ ಅನ್ನೋದು ಇದೆಯಾ? “ಅಂದ.

“ಹೌದು” ಶಿಕ್ಷಕನ ಉತ್ತರ.

“ಮತ್ತೆ… ತಣ್ಣಗಿರೋದು ಅಂತಲೂ ಇದೆಯಾ?”

“ಹೌದು”

ಈಗ ಹುಡುಗ ಕೊಂಚ ದನಿ ಎತ್ತರಿಸಿದ. ” ಅದು ತಪ್ಪು. ತಣ್ಣಗಿರೋದು ಅನ್ನುವ ವಸ್ತು ಯವುದೂ ಇಲ್ಲವೆ ಇಲ್ಲ. ಬಿಸಿ, ಹೆಚ್ಚು ಬಿಸಿ, ಅತೀವ ಬಿಸಿ, ಕಡಿಮೆ ಬಿಸಿ, ಬಿಸಿಯೇ ಅಲ್ಲದ್ದು ಅಂತ ಇದೆಯೆ ಹೊರತು, ತಣ್ಣಗಿರೋದು ಅಂತ ಯವ್ದೂ ಇರೋಲ್ಲ! ತಣ್ಣಗೆ ಅನ್ನೋದನ್ನ ನಾವು ಬಿಸಿಯಲ್ಲದ್ದು ಅನ್ನೋದಕ್ಕೆ ಪರ್ಯಾಯವಾಗಿ ಬಳಸ್ತೀವಿ. ಉಷ್ಣ ಶಕ್ತಿ, ಶೀತ ಶಕ್ತಿಯಲ್ಲ, ವಿರುದ್ಧವೂ ಅಲ್ಲ. …”

ಹುಡುಗ ಹಾಗೆ ವಾದ ಮಾಡ್ತಿದ್ದರೆ, ಶಿಕ್ಷಕರು ಕಣ್ಣರಳಿಸುತ್ತಾ ಕುಳಿತಿದ್ದರು.

ಹುಡುಗ ಮತ್ತೆ ಕೇಳಿದ.” ಕತ್ತಲು ಇದೆಯೇ?”

ಶಿಕ್ಷಕ “ಹೌದು” ಅಂದ.

ಮತ್ತೆ ಹುಡುಗನ ವಾದ. ” ಕತ್ತಲು ಅಂದ್ರೆ, ಬೆಳಕಿಲ್ಲ ಅಂತ ಹೇಳೋದಕ್ಕೆ ಬಳಸೋ ಪದ. ಅದು ಬೆಳಕಿನ ವಿರುದ್ಧ ಪದ ಅಲ್ಲ.”

 ಈಗ ಶಿಕ್ಷಕನ ತಲೆ ಕೆಟ್ಟಿತು. ” ನೀನು ಹೇಳ ಹೊರಟಿರೋದು ಏನು?” ದಬಾಯಿಸಿದರು.

” ಸರ್. ನಿಮ್ಮ ತರ್ಕದ ಸರಕು ಮುಗಿದಿದೆ. ನಿಮ್ಮ ವಿಜ್ಞಾನ ಅಯಸ್ಕಾಂತದ ಆಕರ್ಷಣೆಯನ್ನು ನೋಡಿದೆಯೇ? ಆದರೆ ಅದನ್ನು ಬಳಸುತ್ತೀರಲ್ಲ, ಹೇಗೆ? ವಿದ್ಯುತ್ತಿನ ಬಣ್ಣ, ರೂಪಗಳನ್ನು ಕಂಡವರುಂಟೇ? ಮೂಸಿದವರುಂಟೇ? ಋಚಿ ನೋಡಿದವರುಂಟೇ?  ಆದರು ವಿದ್ಯುಚ್ಚಕ್ತಿಯನ್ನು ನಂಬುತ್ತೀರಲ್ಲ, ಬಳಸುತ್ತೀರಲ್ಲ? ಹೇಗೆ?  ಸಾವನ್ನು ಬದುಕಿನ ವಿರುದ್ಧ ಪದ ಅಂತ ತಿಳಿಯೋದು ಮೂರ್ಖತನವಲ್ಲವೇ?

ಶಿಕ್ಷಕನಿಗೆ ತಾನು ಸೋಲುತ್ತಿರುವ ಅರಿವಾಯಿತು.  ಹುಡುಗ ಧೈರ್ಯದಿಂದ ಮುಂದುವರೆದ.

ಇಲ್ಲಿ ನೀವು ಯಾರಾದರೂ ನಮ್ಮ ಶಿಕ್ಷಕರ ಮೆದುಳು ನೋಡಿದ್ದೀರಾ? “

ಶಾಲೆಗೆ ಶಾಲೆಯೇ ಬಿದ್ದು ಬಿದ್ದು ನಗತೊಡಗಿತು. ” ಅವರ ಮೆದುಳಿನ ಅಂದ- ಆಕಾರ ಕಂಡಿದ್ದೀರಾ? ಋಚಿ ನೋದಿದ್ದೀರಾ?”  ನಮ್ಮ ಪಂಚೇಂದ್ರಿಯಗಳಿಗೆ ನಿಲುಕದ ಮೆದುಳು ಅವರಿಗೆ ಎಂದು ತಿಳಿಯುವುದರೂ ಹೇಗೆ?”

” ಅದು ನಂಬಿಕೆ” ಶಿಕ್ಷಕ ಬಾಯಿ ಹಾಕಿದ. ಅದಕ್ಕೇ ಕಾಯುತ್ತಿದ್ದವನಂತೆ ಹುಡುಗ ತತ್ ಕ್ಷಣ ಹೇಳಿದ, ” ಮಾನವ ಮತ್ತು ದೇವರ ನಡುವೆ ಇರುವುದೂ ಅದೇ ನಂಬಿಕೆ!”

ಈಗ ಶಿಕ್ಷಕನ ಸಮರ್ಥನೆಗೆ ಮಾತುಗಳೇ ಉಳಿದಿರಲಿಲ್ಲ. ವಿದ್ಯಾರ್ಥಿ ಹೇಳಿದ ಹಾಗೆ, ಅವನ ತರ್ಕದ ಸರಕು ಮುಗಿದಿತ್ತು.

ಹೀಗೆ ಅತ್ಯಂತ ಶಿಸ್ತುಬದ್ಧ ವಾದ ಸರಣಿಯಿಂದ ಶಿಕ್ಷಕನ ಬಾಯ್ಮುಚ್ಚಿಸಿ ದೇವರ ಇರುವಿಕೆಯನ್ನ ಎತ್ತಿಹಿಡಿದವರು ಯಾರು ಗೊತ್ತೇ? ಅವರು ’ ಆಲ್ಬರ್ಟ್ ಐನ್’ ಸ್ಟೀನ್!

ವಿಜ್ಞಾನ ಜಗತ್ತಿನಲ್ಲಿ ಅಪ್ರತಿಮ ಸಾಧನೆ ಮಾಡಿದ ಐನ್ ಸ್ಟೀನ್, ಎಂದೂ ದೇವರನ್ನು ಹಳಿದವನಲ್ಲ. ಅವನು ಮಾತ್ರವಲ್ಲ, ನಿಜವಾದ ವಿಜ್ಞಾನಿಗಳೆಲ್ಲರಿಗೂ ವಿಜ್ಞಾನದ, ಮಾನವನ ಮಿತಿಗಳ ಅರಿವಿರುತ್ತದೆ. ಹೀಗಾಗಿಯೇ ಬಹುತೇಕ ಸುಪ್ರಸಿದ್ಧ ವಿಜ್ಞಾನಿಗಳು ಆಸ್ತಿಕರು. ಶ್ರದ್ಧಾವಂತರು. ಆದರೆ ಅರೆ ಬೆಂದ ನಮಗೆ ಅದು ಅರ್ಥವಾಗೋದೇ ಇಲ್ಲ. ಯಂತ್ರಗಳು, ಭೂಗೋಳ- ಖಗೋಳಗಳು, ಆವಿಶ್ಕಾರಗಳಷ್ಟೇ ವಿಜ್ಞಾನ ಅನ್ನುವ ಭಾವನೆ ನಮ್ಮದು ರೈತ ಹೊಲ ಉಳುವಾಗ ನೇಗಿಲೆಳೆಯುವುದೂ ವಿಜ್ಞಾನ ಅನ್ನೋದನ್ನ ಅರಗಿಸಿಕೊಳ್ಳಲು ನಮ್ಮಿಂದಾಗದು. ಕಡಿದಾದ ರಸ್ತೆಯಲ್ಲಿ ಗಾಡಿ ಓಡಿಸುವವ ಬಾಗೋದು ಸೆಂಟ್ರಿಫ್ಯುಗಲ್ ಫೋರ್ಸಿಗೆ ಉದಾಹರಣೆ ಅಂದರೆ ತೃಪ್ತಿಯಾಗದು. ನಮ್ಮ ಪಾಲಿಗೆ ವಿಜ್ಞಾನ, ದೈನಂದಿನ ಜಗತ್ತಿಗೆ ದೂರವಿರುವ, ಆವಿಷ್ಕಾರಗಳ ಸಿದ್ಧಾಂತ. ವಿಜ್ಞಾನ- ಶುದ್ಧ ನಾಸ್ತಿಕವಾದ!

ಐನ್ ಸ್ಟೀನ್ ನನ್ನು, ಅವನಂಥ ಶ್ರದ್ಧಾ-ವಿಚಾರವಂತ ವಿಜ್ಞಾನಿಗಳನ್ನು ಸಾಕಷ್ಟು ನೋಡಿದ್ದರೂ, ಈಗಲೂ ನೋಡುತ್ತಿದ್ದರೂ ನಮಗೆ ಮಾತ್ರ ಬುದ್ಧಿ ಬರುವುದೇ ಇಲ್ಲ. ನಾವು, ತುಂಬಿದ ಕೊಡಗಳಾಗಲು ಸಾಧ್ಯವೇ ಇಲ್ಲ!!

 ಚಕ್ರವರ್ತಿ ಸೂಲಿಬೆಲೆ ಬರಹ ಸಂಗ್ರಹದಿಂದ ಕದ್ದಿದ್ದು.

Blog at WordPress.com.