ಜೀವ ದನಿ

November 8, 2007

ಇದು ನನ್ನ ಕೊನೆಯ ವಂಚನೆ…!

Filed under: ಹೀಗೇ ಸುಮ್ನೆ.. — jeevadani @ 10:35 am

ಇದೊಂದು ಸಾರಿ ಕ್ಷಮಿಸಿಬಿಡು ಗೆಳೆಯಾ,
ಇದು ನನ್ನ ಕೊನೆಯ ವಂಚನೆ!
ನಿನ್ನ ಜಾದೂ ಪೆಟ್ಟಿಗೆಯ ಕುದುರೆ
ಮತ್ತೆಂದೂ ನಗುವುದಿಲ್ಲ
ನಂಬು, ನನ್ನಾಣೆ.

ಏನು ಮಾಡಲಿ ಹೇಳು, ಗೆಳೆಯಾ,
ಹೃದಯ ಹಾಳು ಹೆಣ್ಣು!
ನಿನ್ನ ತಿಳಿ ಮನಸಿಗೆ ನೂರೆಂಟು ಕಲ್ಲು
ಸಾಕು, ಎಸೆಯಲಾರೆ ಮತ್ತೆಂದೂ
ನೋವ ನಾನು.

ಏಕಾಗುವುದು ಮತ್ತೆ ಮತ್ತೆ ಗೆಳೆಯಾ,
ಹೀಗೆ ನನ್ನಿಂದಲೇ ತಪ್ಪು?
ನಾ ಕಲಿತ ಪಾಠವೇ ಹಾಗಿತ್ತು ಬಹುಶಃ
ದಂಡಿಸದೆ ತಿದ್ದಿ ತೀಡಿ
ಒಮ್ಮೆ ನನ್ನನಪ್ಪು.

October 29, 2007

ಬ್ಲಾಗಿಸು ಕನ್ನಡ ಡಿಂಡಿಮವ…

Filed under: ಸಂವಹನ — jeevadani @ 5:54 am

ನವೆಂಬರ್ ೧, ಕನ್ನಡಿಗರ ಹೆಮ್ಮೆಯ ದಿನ. (ಹೊಸತಾಗಿ ಹೇಳ್ತಿದ್ದೀನಿ ಅಂತ ಬೈಕೊಳ್ಬೇಡಿ ಮತ್ತೆ!)
ಪತ್ರಿಕೆಗಳಲ್ಲಿ ವಾರಕ್ಕೊಂದು ದಿನ ವಿಶೇಷ ಬರಹಗಳಿಗೆ, ಸಾಹಿತ್ಯಕ್ಕೆ, ಕತೆ-ಕವನ-ಪ್ರಬಂಧಗಳಿಗೆ ಮೀಸಲು. ಆದ್ರೆ ಈ ಬ್ಲಾಗವತಾರದಿಂದಾಗಿ ನಿತ್ಯವೂ ಒಂದಲ್ಲ ಒಂದು ಕೀಪ್ಯಾಡಿನಿಂದ ಹೊಸತೊಂದು ಕೃತಿ ಮೂಡಿಬರುತ್ತಿದೆ. ಹಾಗೆ ಬರುತ್ತಿರುವುದರಲ್ಲಿ ಶೇ. ೧೦ ಗಟ್ಟಿ ಬರಹಗಳು ಅಂದುಕೊಂಡರೂ, ಕನ್ನಡ ಬರಹ ಜಗತ್ತು ಶ್ರೀಮಂತವಾಗುತ್ತಿದೆ ಅಂತ ಹೇಳಲಡ್ಡಿಯಿಲ್ಲ.
ಈ ಬ್ಲಾಗಿಗರಲ್ಲಿ ಸಿಲಿಕಾನ್ ಕಣಿವೆಯ ಕಂದಮ್ಮಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಶೇಷ. ಇನ್ನುಳಿದಂತೆ ಹೊರನಾಡ ಕನ್ನಡಿಗರು, ಪರದೇಶಗಳಲ್ಲಿ ಕಳೆದುಹೋಗಬಾರದೆಂದು ನಿರ್ಧರಿಸಿ ಬ್ಲಾಗ್ ಬರಹದ ಮೂಲಕ ನಿತ್ಯ ಸಂಪರ್ಕದಲ್ಲಿರುವವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.
ವಿಪರೀತ ಓದಿಕೊಂಡವರೆಲ್ಲ ಕನ್ನಡ ಮರೆಯುತ್ತಾರೆ ಅನ್ನುವವರಿಗೂ ಈ ಬ್ಲಾಗುಗಳು ಉತ್ತರ ನೀಡುತ್ತವೆ.
ಇಂದಿನ ಸಾಫ್ಟ್ ವೇರ್ ಯುಗದಲ್ಲಿ ಭುವನೇಶ್ವರಿಯ ಮಕ್ಕಳು ಕನ್ನಡ ಡಿಂಡಿಮ ಬ್ಲಾಗಿಸತೊಡಗಿದ್ದಾರೆ!!

 * * * *

“ಇವತ್ತಿನ ಪೀಳಿಗೆಗೆ ಓದೋ ಸಹನೆಯೇ ಇಲ್ಲ. ಎಲ್ಲರೂ ಬರೀತೀನಿ ಅನ್ನೋರೇ….! ಈಗೆಂಥದೋ ಈ ಬ್ಲಾಗು? ಇದು ಬೇರೆ ಕೇಡು!!”
ಅಜ್ಜ ಸಿಡುಕುತ್ತಿದ್ದರು.
ಅವರು ನನ್ನ ಚಿಕ್ಕಜ್ಜ. ಮೊದಲಿಂದ್ಲೂ ಅವರಿಗೆ ಪುಸ್ತಕಗಳು ಅಂದ್ರೆ ಆಯಿತು. ಅದು ಈಗಿನಂತೆ ’ಓದುವ ಪ್ರವೃತ್ತಿಯವರೆಲ್ಲ ಬರೆಯಲು ಪ್ರಯತ್ನಿಸಲೇಬೇಕು’ ಅಂತ ತಮಗೆ ತಾವೇ ನಿಯಮ ರೂಪಿಸಿಕೊಂಡಂಥ ಕಾಲವಲ್ಲ.ಆಗಿನ ಕಾಲದ ಇತರೆಲ್ಲ ಶುದ್ಧಾಂಗ ಓದುಗರಂತೆ ಅವರೂ ಒಬ್ಬ ಓದುಗರು.
ಸಾಫ್ಟ್ ವೇರ್ ಮಕ್ಕಳಿಂದಾಗಿ ಅವರ ಮನೆಗೂ ಕಂಪ್ಯೂಟರ್ರು, ನೆಟ್ಟುಗಳು ಕಾಲಿಟ್ಟಿದ್ದವು. ೭೦ರ ನನ್ನಜ್ಜನಿಗೆ ಹೊಸತನ್ನು ಕಲಿಯುವುದರಲ್ಲಿ ಏನೋ ಖುಷಿ. ಆ ಸಂಭ್ರಮದ ಸಂಕೋಚಕ್ಕೋ ಏನೋ ಯಾವಾಗಲೂ ಹೊಸ ಪ್ರಯೋಗಗಳನ್ನು ಹೀಯಾಳಿಸುತ್ತಲೇ ಅದರಲ್ಲಿ ಕೈ ಹಕುತ್ತಿದ್ದರು ಅವರು.
“ಕನ್ನಡದಲ್ಲಿ ಎಷ್ಟೆಲ್ಲ ಬರ್ತಿದೆ ನೋಡಿ… ಹೊಸ ಹೊಸ ಹುಡುಗರು ಬರೀಲಿಕ್ಕೆ ಶುರು ಮಾಡಿದಾರೆ” ಅಂತ ನಾನು ಅವರಿಗೆ ಮೊದಲು ಒಂದೆರಡು ಬ್ಲಾಗು ತೋರಿಸಿದ್ದೆ. ಹಾಯಾಗಿ ಕಾಲುಚಾಚಿ ಓದಿನ ಸುಖ ಅನುಭವಿಸುತ್ತಿದ್ದವರಿಗೆ ಹೀಗೆ ಕುಳಿತು ಕಣ್ಣು ನಿರುಕಿಸಿ ಪರದೆ ನೋಡೋದು ಕಿರಿಕಿರಿ ಅನಿಸಿರಬೇಕು, ಈ ಮೇಲಿನಂತೆ ನನಗೆ ಮಂಗಳಾರತಿ ಮಾಡಿದ್ದರು!

ನಾಲ್ಕೇ ತಿಂಗಳು…
ಅವಧಿಯಲ್ಲಿ ಗಾಳಿಬೆಳಕು ನೋಡಿದ್ಯಾ?
ಮೈಸೂರು ಪೋಸ್ಟ್ ನಲ್ಲಿ ಹೊಸತು ಏನೂ ಬಂದಿಲ್ಲ ಯಾಕೆ?
ಭಾಮಿನಿ ಷಟ್ಪದಿ ಬ್ಲಾಗಾಗಿದೆ. ಆ ಹೆಸರಿನದೊಂದು ಕಾಲಮ್ಮೂ ಇದೆ ಅವಧಿಯಲ್ಲಿ…
ನೆಲದ ಮಾತು ಹೊಸತು.
ಪಡಖಾನೆಯ ಹುಡುಗಿ, ಸಂಕಲನ ಮಾಡಬಹುದು!
ಋಜುವಾತು ನಿಂತು ನಿಂತು ಬರುತ್ತೆ…
ಈ ಸಿಂಧು ಹುಡುಗಿ ಯಾರು?
ಜೋಗಿ ಮನೆಗಿಂತ ಓದು ಜನಮೇಜಯ ಇಷ್ಟ. ಅಲ್ಲಿ ಎಷ್ಟೊಂದು ಪುಸ್ತಕಗಳು!
ಬುಕ್ ಬಾಜಾರ್ ಒಳ್ಳೆ ಪ್ರಯತ್ನ…
ಜೀವ ದನಿಯ ಸದ್ದು ಅಡಗಿದಹಾಗೆ ಕಾಣತ್ತಲ್ಲ ಯಾಕೆ?
- ವಾರಕ್ಕೊಮ್ಮೆ ಕಾಲ್ ಮಾಡುವ ಅಜ್ಜ, ಈಗ ಮಾತಾಡುವುದು ಬರೀ ಇಂಥದ್ದನ್ನೇ!
ಅಷ್ಟೇ ಅಲ್ಲ, “ಕಂಪ್ಯೂಟರ್ರಲ್ಲಿ ಇಷ್ಟೊಂದು ವೆರೈಟಿ ಕನ್ನಡ ಬರಹಗಳು ಓದೋಕೆ ಸಿಗ್ತಿರೋದು ಒಳ್ಳೇದೇ.
ಪುಸ್ತಕ ಹಿಡಿಯೋ ಸಹನೆ ಇಲ್ಲದವರಿಗೆ ಇದು ಅರಾಮ. ಓದದೇ ಕಳೆದುಹೋಗುವ ಕನ್ನಡ, ಕಡೆಪಕ್ಷ ಬರೆದಾದರೂ ಉಳಿಯಲಿ!” ಅಂತ ರಾಜಿಗೆ ಇಳಿದಿದ್ದಾರೆ ನನ್ನಜ್ಜ.
ಆದರೂ, ಕೆಲವೊಂದು ತೀರಾ ಒಳ್ಳೆಯ ಲೇಖನಗಳನ್ನ ಓದಿದಾಗ,”ಇದು ಪೇಪರ್ರಲ್ಲಿ ಬಂದ್ರೆ ಎಷ್ಟು ಚೆನ್ನ!” ಅಂತ ಅವರು ಗೊಣಗೋದು ತಪ್ಪಿಲ್ಲ.
ಕೆಲವೊಮ್ಮೆ ನನಗೂ ಹಾಗನ್ನಿಸತ್ತೆ. ನಿಮಗೆ?

October 27, 2007

ನಿನ್ನ ಗಂಡೆದೆ ಹೀಗೆ…

Filed under: ಹೀಗೇ ಸುಮ್ನೆ.. — jeevadani @ 8:17 am

ನಿನ್ನೆದೆಯಲ್ಲಿ ಮುಖವಿಟ್ಟಾಗ
ಒಳಗೆಲ್ಲ ಏನೊ ಅರಳಿದ ಸದ್ದು.
ನಿದ್ದೆಯ ಮಗು ನಕ್ಕ ಹಾಗೆ,
ಹಾಗೇ ಸಣ್ಣ ನಿರುಮ್ಮಳ.

ಕೂದಲ ನಡುವೆ ಬೆರಳು ತೂರಿ
ನೀ ನನ್ನ ತಲೆಯನುಜ್ಜುವಾಗ
ಸಾವಿರ ದಳದ ಮೊಗ್ಗು ಬಿರಿದು,
ಸಹಸ್ರಾರ ಚಟಪಟ.

ಜಗದ ಬೆರಗು ಹರಿಯುವಂತೆ
ತುಳುಕುತ್ತ ನಗುವ
ನಿನ್ನ ಗಂಡೆದೆ ಹೀಗೆ,
ಅಮ್ಮನ ತೊಡೆಯ ಹಾಗೆ…

October 24, 2007

’ಚಿತ್ರದ ಹುಡುಗಿಯ ಸುತ್ತ’ ಒಂದು ಕಥೆ

Filed under: ಹಾಸು ಹೊಕ್ಕು — jeevadani @ 4:24 pm

 images2.jpg

ಎಷ್ಟೊಂದು ದಿನಗಳಾಗಿತ್ತು ನಾವು ಹೀಗೆ ಪತ್ರದಲ್ಲಿ ಹರಟಿ, ಅಲ್ವಾ? ಇರಲಿ. ನೀನು ಹಾಕಿದ ಕಂಡೀಷನ್ ಒಂದು ರೀತಿಯಲ್ಲಿ ಒಳ್ಳೆಯದೇ ಆಯ್ತು. ನನಗೂ ಹಳೆಯ ನೆನಪುಗಳನ್ನ ಕೆದಕಲಿಕ್ಕೊಂದು ನೆವ ಸಿಕ್ಕಹಾಗಾಯ್ತು! ಆದ್ರೆ, ನೀನೂ ನನಗೆ ಪತ್ರ ಬರೀಬೇಕು. ಪ್ರತೀ ಪತ್ರದಲ್ಲೂ ಒಂದು ಕಥೆ ಇರಬೇಕು. ಸರೀನಾ? ಮೊದಲು ನನ್ನಿಂದ್ಲೇ ಶುರುವಾಗಿಬಿಡಲಿ.

ಆಗ ರಷ್ಯಾ ಒಡೆದು ಚೂರಾಗಿರಲಿಲ್ಲ. ಅದು ಸೋವಿಯತ್ ರಷ್ಯಾ. ವಿಶ್ವದ ಬಲಿಷ್ಠ ದೇಶ. ಅಂತಹ ರಷ್ಯಾದ ವಿರುದ್ಧ ಕಾಲುಕೆರೆದುಕೊಂಡು ಯುದ್ಧಕ್ಕೆ ಹೋದ ಆಫ್ಘಾನಿಸ್ತಾನ ತನ್ನ ದೇಶದ ಇಪ್ಪತ್ತೈದು ಲಕ್ಷ ಜನರನ್ನು ನಿರಾಶ್ರಿತರನ್ನಾಗಿ ಮಾಡಿಹಾಕಿತ್ತು. ಅದು ೧೯೮೩-೮೪ರ ಕಥೆ. ನೂರಾರು ನಿರಾಶ್ರಿತರ ಶಿಬಿರಗಳಲ್ಲಿ ಜನ ಕಳೆದುಹೋಗಿದ್ದರು.

ಛಾಯಾಗ್ರಾಹಕ ಪತ್ರಕರ್ತ ಸ್ಟೀವ್ ಮೆಕ್ ಕಮ್ ದುಃಖ, ದೈನ್ಯ, ಹತಾಶೆ, ಸಂಕಟವನ್ನು ಚಿತ್ರದಲ್ಲಿ ಬಿಂಬಿಸಲೆಂದೇ ಕ್ಯಾಮೆರಾ ಹಿಡಿದು ಈ ಯುದ್ಧ ನಿರಾಶ್ರಿತರ ಶಿಬಿರಗಳಲ್ಲಿ ತಿರುಗುತ್ತಿದ್ದ.

ಪಾಕಿಸ್ತಾನ- ಆಫ್ಘನ್ ಗಡಿಯ ನಸೀರಾಬಾಗ್ ನಲ್ಲೊಂದು ನಿರಾಶ್ರಿತರ ಶಿಬಿರ. ಅವತ್ತು ಡಿಸೆಂಬರ್ ನ ಸಂಜೆ. ಟೆಂಟೊಂದರ ಪರದೆ ಸರಿಸುತ್ತ ೧೨ ವರ್ಷದ ಬಾಲಕಿಯೊಬ್ಬಳು ಹೊರಬರುವುದಕ್ಕೂ, ಸ್ಟೀವ್ ಕ್ಯಾಮೆರಾ ಹಿಡಿದು ಆ ಟೆಂಟಿನತ್ತ ತಿರುಗುವುದಕ್ಕೂ ಸರಿಯಾಗಿಹೋಯ್ತು. ಪರಿಣಾಮ, ಒಂದು ಅದ್ಭುತ ಚಿತ್ರ. ಕೆಂಪು ದುಪಟ್ಟಾ ಹೊದ್ದ ಮುಗ್ಧ ಬಾಲೆ, ಒಳಗೆ ಕಟ್ಟಿಗೆಯ ಒಲೆಯಲ್ಲಿ ಅಡುಗೆಯ ಕೆಲಸಕ್ಕೆ ನಿಂತಿರಬೇಕು. ಹೊಗೆ ತಾಳಲಾರದೆ ಹೊರಗೆ ಬಂದಳೇನೋ? ಅವಳ ಹಸಿರು ಕಂಗಳಲ್ಲಿ ನೀರು ಮಡುಗಟ್ಟಿತ್ತು. ಮರು ವರ್ಷ ಜೂನ್ ನಲ್ಲಿ ಆ ಚಿತ್ರ ನ್ಯಾಷನಲ್ ಜಿಯಾಗ್ರಫಿಕ್ ಸಂಚಿಕೆಯ ಮುಖಪುಟ ಅಲಂಕರಿಸಿತು. ಮತ್ತೆ ಅದು ಹಿಂದೆ ನೋಡಲಿಲ್ಲ. ಆ ಚಿತ್ರವೇ ಒಂದು ಜಾಗತಿಕ ಸುದ್ದಿಯಾಯಿತು. ಜಗತ್ತಿನ ಮೂಲೆ ಮೂಲೆಯ ಶಿಲ್ಪಿಗಳು, ಚಿತ್ರಕಾರರು, ಕಸೂತಿ- ಕೆತ್ತನೆಕಾರರು ಈ ಚಿತ್ರವನ್ನು ಮಾದರಿಯಾಗಿಟ್ಟುಕೊಂಡು ಇನ್ನಷ್ಟು ಚಿತ್ರ ಬರೆದರು. ಕೊನೆಗೆ ಈ ಚಿತ್ರ ಜಾಹೀರಾತು ಕಂಪೆನಿಗಳನ್ನು ಸೆಳೆಯಿತು.

ಒಂದು ಚಿತ್ರ, ಸ್ಟೀವ್ ನ ವರ್ತಮಾನ, ಭವಿಷ್ಯ ಎಲ್ಲವನ್ನೂ ಬದಲಾಯಿಸಿತ್ತು. ಖ್ಯಾತಿ, ಹಣ, ಸ್ಟೀವ್ ನನ್ನು ಆವರಿಸಿತು.

ಅದೊಂದು ದಿನ ಸ್ಟೀವ್ ಯೋಚನೆಗೆ ಬಿದ್ದ. ನನಗೆ ಇಷ್ಟೆಲ್ಲ ತಂದುಕೊಟ್ಟಿರುವ ಈ ಚಿತ್ರದಲ್ಲಿರುವ ಹುಡುಗಿಗೆ ಏನು ಸಿಕ್ಕಿದೆ? ಅವಳಿಗೇನಾದರೂ ಸಹಾಯ ಮಾಡಬೇಕು ಅಂತ ನಿಶ್ಚಯಿಸಿದ. ಅವಳನ್ನು ಹುಡುಕಲು ಹೊರಟ. ನಸೀರಾಬಾದಿನ ಶಿಬಿರ ಬರಖಾಸ್ತಾಗಿತ್ತು. ಸ್ಟೀವ್ ಅವಳನ್ನು ಹುಡುಕಲು ಒಂದಲ್ಲ, ಹತ್ತು ಸಲ ಬಂದ. ಅವಳು ಸಿಗಲಿಲ್ಲ. ಆ ಹುಡುಗಿ ದೊಡ್ಡವಳಾಗಿ ’ಬುರ್ಖಾ’ ಸೇರಿಬಿಟ್ಟಿದ್ದಳು. ಕೊನೆಗೆ ಇವನು ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟ. ಹಣದ ಆಸೆಗೆ ಯಾರ್ಯಾರೋ ಬಂದರು. ಅಲ್ಪ ಸ್ವಲ್ಪ ಹೋಲುವವರು ತಮ್ಮದೇ ಚಿತ್ರ ಅಂತ ವಾದಕ್ಕಿಳಿದರು. ಕೊನೆಗೆ ಆ ಪತ್ರಿಕೆ ಒಂದು ತಂಡವನ್ನೇ ಹುಡುಕಲು ಕಳುಹಿಸಿತು. ಆಗಲೂ ಫಲಿತಾಂಶ ಶೂನ್ಯ.

ಸ್ಟೀವ್ ಸೋಲಲಿಲ್ಲ. ಪ್ರಯತ್ನ ಮುಂದುವರೆಸಿದ್ದ. ೨೦೦೨ರಲ್ಲಿ ಅದು ಫ್ಲಿಸಿತು. ೧೮ ವರ್ಷದ ತರುವಾಯ ಆ ಚಿತ್ರದ ಹುಡುಗಿ ಸಿಕ್ಕಳು. ಅವಳು ಶರ್ಬತ್ ಗುಲಾ!

ಅವಳೇ ಅವಳೆಂದು ಸಾಬೀತಾಗಲು ತಿಂಗಳು ಬೇಕಾಯಿತು. ಸ್ಟೀವ್ ಆ ಗುಲಾ ಸೇರಿದಂತೆ ಅಂತಹ ನಿರಾಶ್ರಿತ ಹೆಣ್ಣುಮಕ್ಕಳಿಗೆಂದೇ ದತ್ತಿನಿಧಿ ಸ್ಥಾಪಿಸಿದ್ದಾನೆ.

ಒಂದು ಚಿತ್ರ ನೂರು ಶಬ್ದಗಳನ್ನ ಕಟ್ಟಿಕೊಡುತ್ತವೆಯಂತೆ. ಇಲ್ಲಿ ಗುಲಾಳ ಆ ಒಂದು ಚಿತ್ರ ನೂರಾರು ಬದುಕು ಕಟ್ಟಿಕೊಟ್ಟ ಬಗೆ ನೋಡು! ಸ್ಟೀವ್ ಕೂಡಾ ಮೆಚ್ಚುಗೆಯಾದ. ನಿನಗೇನನ್ನಿಸಿತು ಹೇಳು.

ಕಾಯ್ತಿರ್ತೀನಿ.

ನಿನ್ನ,

ಪೂರ್ವಿ.

September 26, 2007

ಮತ್ತೆ ಮತ್ತೆ ಮಹಾಭಾರತ…

Filed under: ಸಂವಹನ — jeevadani @ 4:51 pm

ಮಹಾಭಾರತದ ನಾಯಕ ಯಾರು? ಕೇಳಿ ನೋಡಿ. ಶ್ರೀಕೃಷ್ಣನಿಂದು ಹಿಡಿದು ಯುಧಿಷ್ಟಿರ, ಭೀಮ, ದುರ್ಯೋಧನರವರೆಗೆ ಒಬ್ಬೊಬ್ಬರು ಒಂದೊಂದು ಹೆಸರು ಹೇಳಿಕೊಂಡು ಬರ್ತಾರೆ. ಅದರೆ, ನಾಯಕಿ? ದ್ರೌಪದಿ! ಊಹೂಂ… ಎರಡು ಮಾತೇ ಇಲ್ಲ. ಕೃಷ್ಣ ಮಹಾಭಾರತದ ಸೂತ್ರಧಾರನಾದರೆ, ದ್ರೌಪದಿ ಅದರ ಕ್ರಿಯಾಶಕ್ತಿ.

ತಮಗಾದ ಅನ್ಯಾಯವನ್ನು ಪ್ರತಿಭಟಿಸ್ತ, ಅದಕ್ಕೆ ಪ್ರತೀಕಾರ ತೀರಿಸುತ್ತ, ಗೋಳಾಟ, ಸ್ವಾನುಕಂಪಗಳಿಲ್ಲದೆ ಅದನ್ನ ತನಗೆ ತಾನೆ ನಿಭಾಯಿಸುತ್ತ ಅದೆಷ್ಟೋ ದ್ರೌಪದಿಯರು ಅಗಿ ಹೋಗಿದ್ದಾರೆ, ಆಗುತ್ತಲೇ ಇದ್ದಾರೆ, ಮುಂದೂ ಆಗುತ್ತಿರುತ್ತಾರೆ, ನಮ್ಮಂಥ ದುರ್ಯೋಧನ-  ಧರ್ಮರಾಯರಿರುವವರೆಗೂ.

ಛೆ! ಈಗ ಪರಿಸ್ಥಿತಿ ತೀರಾ ಹಾಗೇನಿಲ್ಲ ಬಿಡಿ!! ಇತ್ತೀಚೆಗೆ ನಾವು, ಗಂಡುಪ್ರಾಣಿಗಳು ಬದುಕೋದೇ ಕಷ್ಟವಾಗಿದೆ. ಹೆಣ್ಣು ಮಕ್ಕಳ ಸಂಖ್ಯೆ ಬೇರೆ ಕಡಿಮೆಯಾಗಿ ಅವರಿಗೆ ಡಿಮ್ಯಾಂಡ್ ಹೆಚ್ಚಿ, ಮಹಾರಾಣಿಯರ ಥರ ಮೆರೀತಿದಾರೆ… ಇನ್ನೂ ಹೀಗೇ ಏನೇನೋ ಸಮಜಾಯಿಷಿಗಳನ್ನ ಕೊಡಬಹುದು. ಆದರೆ, ಪರಿಸ್ಥಿತಿ ಹೀಗಿರುವಾಗಲೂ ನಾವು ಬುದ್ಧಿ ಕಲಿತುಕೊಂಡಿಲ್ಲವಲ್ಲ, ಇದೇ ವಿಪರ್ಯಾಸ!

ಒರಿಸ್ಸಾದಲ್ಲಿ ತೀರಾ ಹದಿನೈದಿಪ್ಪತ್ತು ದಿನಗಳ ಕೆಳಗೆ ನಡೆದ ಘಟನೆಯನ್ನೆ ತೊಗೋಳ್ಳಿ. ಪೊಗರು ಹೆಚ್ಚಾದ ಭಾವ, ತನ್ನ ಇಸ್ಪೀಟು ಚಟಕ್ಕೆ ನಾದಿನಿಯನ್ನೇ ಪಣವಾಗಿಟ್ಟ. ಗೆದ್ದವನಿಗೆ ಒಂದೇ ದಿನದಲ್ಲಿ ಮದುವೇನೂ ಮಾಡಿಕೊಟ್ಟ. ಭಾವನ ಕಾಳಜಿಗೆ ನಾದಿನಿಗೆ ಖುಶಿಯೂ ಆಗಿದ್ದಿತೇನೋ? ಆದರೆ ತಾನು ಯಾರಿಗೋ ಸೋತವಳು ಅಂತ ಗೊತ್ತಾಗಿದ್ದೇ ಕೆರಳಿ ನಿಂತಳು. ಮಹಿಳಾ ಸಂಘಟನೆಗಳು, ಆಯೋಗ ಎಲ್ಲವೂ ಅವಳ ಬೆಂಬಲಕ್ಕೆ ನಿಂತವು.

ಈಗ ಮತ್ತೆ ಮತ್ತೊಂದು ಮಹಾಭಾರತ. ಹೀಗೆ ಸುಖಾಸುಮ್ಮನೆ ಹೆಂಡತಿಯ ತಂಗಿಯನ್ನ ಪಣಕ್ಕಿಡುವ ಹಕ್ಕು ಅವಂಗೆ ಕೊಟ್ಟವರಾದರೂ ಯಾರು? ಜೂಜಲ್ಲಿ ಗೆದ್ದು ಮದುವೆಯಾದ ಭೂಪ ಎಂಥವನಿರಬಹುದು? ಹಿಂದೆಲ್ಲ ಯುದ್ಧ ಪಣವಾಗಿ, ವೀರ ಪಣವಾಗಿ ಹೆಣ್ಣುಮಕ್ಕಳನ್ನು ಮುಂದಿಡುತ್ತಿದ್ದರಂತೆ. ಚಂದ್ರಗುಪ್ತ ಸೆಲ್ಯೂಕಸನ ತಂಗಿಯನ್ನು ಮದುವೆಯಾಗಿದ್ದು ಹೀಗೇ. ಮಾದ್ರಿಯನ್ನ ಪಾಂಡುರಾಜ ಮದುವೆಯಾಗಿದ್ದೂ ಹೀಗೇ. ರಜಪೂತ ಹೆಣ್ಣುಮಕ್ಕಳೆಲ್ಲ ಮೊಘಲರ ಜನಾನಾ ಸೇರಿದ್ದೂ ಹೀಗೇ…. 

ಇಲ್ಲಿ, ಕೊಟ್ಟವ ಕೋಡಂಗಿ, ಇಸ್ಕೊಂಡವ ಈರಭದ್ರ! ಕಳಕೊಂಡಿದ್ದು ಮಾತ್ರ ಹೆಣ್ಣು!!

ಇರಲಿ. ಜಗತ್ತಿನಲ್ಲಿ ಎಲ್ಲೇ ಹೆಣ್ಣಿನ ಮೇಲೆ ಅತ್ಯಾಚಾರ, ಬಲಾತ್ಕಾರಗಳು (ಪ್ರತಿ ಬಾರಿಯೂ ಈ ಪದಗಳಿಗೆ ’ರೇಪ್’ ಅನ್ನುವ ಅರ್ಥವನ್ನೇ ಹಚ್ಚಬೇಕಿಲ್ಲ) ನಡೆಯಲಿ, ಅದನ್ನು ಪ್ರತಿಭಟಿಸುವುದು ಮತ್ತಷ್ಟು ಹೆಣ್ಣು ಮಕ್ಕಳೇ. ಇನ್ನೇನು ಅದರ ಕಾವು ಏರಿ ತಮಗೂ ತಗಲುತ್ತದೆನ್ನುವಾಗ ನಾವು ಮೈ ಮುರಿದು ಏಳುತ್ತೇವೆ. ಜೊತೆಗೊಂದು ಧಿಕ್ಕಾರ ಕೂಗಿ ಸುಮ್ಮನಾಗುತ್ತೇವೆ.  ಈಗ ಒರಿಸ್ಸಾದ ಬಿನೋದಿನಿ ವಿಷಯದಲ್ಲೂ ಹಾಗೆಯೇ ಆಗಿದೆ.

ಸರಿ. ಎಲ್ಲೆಡೆಗಳಿಂದ ಮಹಿಳೆಯರು ನಮ್ಮನ್ನೂ ಸೇರಿಸಿ ’ಗಂಡಿನ ಜಾತಿಯೇ ಇಷ್ಟು’ ಅಂತ ಹಿಡಿಶಾಪ ಹಾಕುವ ಮುನ್ನ, ಪಾಠ ಕಲಿಸುವ ದ್ರೌಪದಿಯರಾಗುವ ಮುನ್ನ,  ಎಚ್ಚೆತ್ತುಕೊಳ್ಳೋಣ ಬನ್ನಿ. ಹಾಗೂ ಅಷ್ಟಿಷ್ಟು ಅಹಂಕಾರದ ಚರಬಿ ಉಳಿದಿದ್ದರೆ  ಇಳಿಸ್ಕೊಳ್ಳೋಣ ಬನ್ನಿ.

ಇದನ್ನ ಹೇಳಬಹುದಿತ್ತಾದರೂ ಹೇಗೆ?

Filed under: ಡಾರ್ಕ್ ರೂಮ್ — jeevadani @ 3:20 pm

paintings1.jpgpaintings1.jpgpaintings1.jpgpaintings1.jpgpaintingspaintings jpg

- ಮಿಂಚು-

ಇದರ ತುಂಬ ಬರೀ ಮಡಚಿಟ್ಟ ಪುಟಗಳೇ. ಈ ರೂಮಿಗೆ ಬೀಗ ಹಾಕಿ, ನಾನೇ ಕೀಲಿ ಕಳೆದು ಹಾಕಿದ್ದೇನೆ. ಹೀಗೆ ಕತ್ತಲಲ್ಲಿ ಕೂಡಿಟ್ಟರೂ ಈ ಕತೆಗಳು ನೂರಾಗಿ, ಸಾವಿರವಾಗಿ, ಕೊಳೆತ ತರಕಾರಿಯ ಮೇಲೆ ಗಿಜಿಗುಟ್ಟುವ ಹುಳಗಳಂತೆ ತೆವಳುತ್ತ ತೆವಳುತ್ತ ಎಲ್ಲೆಲ್ಲೂ ಹರಿದಾಡಿ, ಗೋಡೆಯೊಳ ತೂರಿ, ಇತ್ತಲಿಂದ ಹೊರಬರುತ್ತಿವೆ, ನನ್ನ ಹುರಿದು ಮುಕ್ಕುತ್ತಿವೆ.

kitaki-copy.jpg

     ಎಲ್ಲರೂ ಕೇಳ್ತಾರೆ. ಮೂವತ್ತು ದಾಟಿದ್ರೂ ಮದುವೆಯತ್ತ ಮನಸ್ಯಾಕೆ ಮಾಡಿಲ್ಲ ಅಂತ. ಈಗಿನ         ಕಾಲದಲ್ಲಿ ಮದುವೆಗೆ ಇಂತಿಷ್ಟೇ ವಯಸ್ಸಾಗಿರಬೇಕು ಅಂತೇನಿಲ್ಲ ಬಿಡಿ. ಆದ್ರೂ,   ಸಂಪ್ರದಾಯಸ್ಥ  ಮನೆತನ, ಕೆಳ್ತಾರೆ.

    ಹಾಗಂತ ನಾನು ಚೆಂದವಿಲ್ಲ ಅಂತೆನಲ್ಲ. ಅವತ್ತಿನ ಸಹಪಾಠಿಗಳಿಂದ ಹಿಡಿದು, ಇವತ್ತಿನ   ಸಹೋದ್ಯೋಗಿಗಳವರೆಗೂ ಎಲ್ರೂ ನನ್ನ ಸ್ಮಾರ್ಟ್ ಅಂತಾರೆ. ಇಪ್ಪತ್ತೈದರ ಹಾಗೆ ಕಾಣುವ ನನ್ನ ಮೂವತ್ತರ ಬಗ್ಗೆ ನನಗೂ ಹೆಮ್ಮೆ ಇದೆ. ಆದರೆ, ಯಾವ ಪುರುಷಾರ್ಥಕ್ಕೆ?

ಅವನೊಬ್ಬನಿದ್ದ. ಅಂದಗಾರ. ಚಂದಿರ ಮುಖ, ಬೋಳು ಮೀಸೆ, ನುಣ್ಣನೆ ಗಡ್ಡ.ಕಣ್ಣಲ್ಲಿ ತೀರದ ತುಂಟತನ. ನನಗಿಷ್ಟವಾಗುವ ಬಣ್ಣ ಅವಂಗೂ ಇಷ್ಟ. ನಾನಿಷ್ಟಪಡುವ ಪರ್ಫ್ಯೂಮ್, ಐಸ್ ಕ್ರೀಮ್ ಎಲ್ಲವೂ ಅವನಿಗಿಷ್ಟ. ಅವಂಗೆ ಕಂಪನಿ ಕೊಡಲೆಂದೇ ಕುಡಿಯೋದು ಕಲ್ತಿದ್ದೆ ನಾನು.

ನಾನವನkitaki jpgನ್ನ ಹುಚ್ಚುಚ್ಚಾಗಿ ಪ್ರೀತಿಸ್ತಿದ್ದೆ. ಅವನನ್ನ ಮಾತ್ರ. ಅವನ ಕೈಬೆರಳ ತುದಿ ಸೋಂಕಿದರೂ ರೋಮ ನಿಮಿರಿ ನಿಲ್ತಿತ್ತು. ಉಸಿರಾಟ ಏರುಪೇರಾಗಿ ಹೋಗ್ತಿತ್ತು. ಸಧ್ಯ. ಯರೂ ಇದನ್ನ ಗಮನಿಸ್ತಿರಲಿಲ್ಲ ಅನ್ನೋದೇ ಸಮಾಧಾನ! ಆದರೆ… ಅಂವ ಕೂಡ ಇದನ್ನ ತಲೆಗೆ ತೊಗೊಳ್ಳದೆ ಉಳಿದುಬಿಟ್ಟ. ಉಳಿದೆಲ್ಲ ಗಂಡಸರ ಹಾಗೆ ಅವನಿಗೂ ಒಬ್ಬಳು ಸುಂದರಿ ಗಂಟು ಬಿದ್ದಳು. ನಾನು ಅವನ ಬಳಿ ಪ್ರೀತಿ ತೋರಿಕೊಳ್ಳುವ ಸಾಹಸವನ್ನೇ ಮಾಡಲಿಲ್ಲ.

ಮನೆಯಲ್ಲಿ ನನ್ನ ಮದುವೆ ಮಾತುಕಥೆ. “ಜೀವ ಕಳ್ಕೊಳ್ತೀನಿ ಹೊರತು, ಮದ್ವೆಯಾಗೋಲ್ಲ” ನಾನೂ ಹಟ ಹಿಡಿದೆ. “ಯಾರನ್ನದ್ರೂ ಪ್ರೀತಿಸ್ತಿದೀಯಾ?” ಕೇಳಿದರು. ನನು ಹೌದೆಂದೆ. ಅದು ಯಾರು ಯಾರೆಂದು ಪೀಡಿಸಿದರು.

ಊಹೂಂ… ಹೇಗೆ ಹೇಳಲಿ? ನಾನು ಡಾರ್ಕ್ ರೂಮಲ್ಲಿ ಕೂಡಿಟ್ಟಿರೋದು ಅದನ್ನೇ.  ಈ ಮನೆಮಂದಿ ಬೇಕಿದ್ದರೆ ಹೀಗೆ ಜೀವಮನವಿಡೀ ದೇವದಾಸನಂತೆ ಇರೋದನ್ನ ನುಂಗಿಕೊಂಡು ನಕ್ಕಾರು.

ಆದರೆ….

ನಾ ಪ್ರೀತಿಸಿದ್ದು ಒಬ್ಬ ಗಂಡಸನ್ನ ಅಂದರೆ ಸಹಿಸಿಯಾರೇ? ಅದರಲ್ಲೂ, ಹತ್ತು ದೇವರಿಗೆ ಹರಕೆ ಹೊತ್ತು ಹುಟ್ಟಿದ ಕಿರಿಮಗ ನಾನಾಗಿರುವಾಗ!?

September 25, 2007

ಹಾಗೆ ದೇವರಿದ್ದಾನೆ ಅಂತ ವೈಜ್ಞಾನಿಕವಾಗಿ ಸಾಧಿಸಿದವ ಯಾರು ಗೊತ್ತಾ?

Filed under: ಪಿಕ್ ಪಾಕೆಟ್ — jeevadani @ 5:45 pm

ನಾನು ತುಂಬಾ ಇಷ್ಟಪಟ್ಟ ಸಂಭಷಣೆ ಇದು.ವಿದ್ಯಾರ್ಥಿ ಮತ್ತು  ಶಿಕ್ಷಕನ ನಡುವಿನದ್ದು. ವಿದ್ಯಾರ್ಥಿ ಬಲು ಚುರುಕು. ಶ್ರದ್ಧಾವಂತ. ಆದರೆ ಶಿಕ್ಷಕ ಒಬ್ಬ ತರ್ಕ ಪಂಡಿತ. ಹೀಗಾಗಿ ನಾಸ್ತಿಕ.  ಆತ ದೇವರಿಲ್ಲ ಅಂತ ವಾದಿಸೋದನ್ನೇ - ನಂಬಿಸೋದನ್ನೇ ವೃತ್ತಿಯಾಗಿಸ್ಕೊಂಡಿದ್ದ.

ಅದೊಮ್ಮೆ ತರಗತಿಯಲ್ಲಿ ಬಿರುಸಿನ ಚರ್ಚೆ. “ನೀನು ದೇವರನ್ನು ನಂಬ್ತೀಯಾ?” ಕೇಳಿದ. ” ಖಂಡಿತವಾಗಿಯೂ” ವಿದ್ಯಾರ್ಥಿಯ ಉತ್ತರ. ” ದೇವರು ಒಳ್ಳೆಯವನಾ? ಶಕ್ತಿವಂತನಾ?” ಮತ್ತೊಂದು ಪ್ರಶ್ನೆ. ” ಹೌದು” ಬಾಲಕನ ಮುಗ್ಧ ವಾಗಿ ತಲೆಯಾಡಿಸಿದ.

ಶಿಕ್ಷಕ ತನ್ನ ವರಸೆ ತೆಗೆದ. ” ನನ್ನ ಸಹೋದರನಿಗೆ ಕ್ಯಾನ್ಸರ್ ಬಂದಿತ್ತು. ಆತ ದೇವರನ್ನು ಪ್ರಾರ್ಥಿಸಿದ. ನಮ್ಮಲ್ಲಿ ಬಹಳಷ್ಟು ಜನ ಹುಷಾರಿಲ್ಲದವರಿಗೆ ಸಹಾಯ ಮಾಡುತ್ತೇನಲ್ವೇ? ಆದರೆ ಆ ದೇವರು ಮಾಡಲಿಲ್ಲ. ಹಾಗಿದ್ದ ಮೇಲೆ ಆತ ದೇವರು ಹೇಗೆ?ಈ ಪ್ರಶ್ನೆಗೆ ಏನುತ್ತರ ಕೊಡ್ತೀರಿ?” ಆ ಹುಡುಗ ಶಾಂತವಾಗಿಯೇ ಇದ್ದ. ಮತ್ತೆ ಅವನೇ ಮುಂದುವರೆಸಿದ. “ಉತ್ತರ ಇಲ್ವಲ್ಲಾ? ಹೋಗಲಿ, ಈಗ ಹೇಳಿ. ರಾಕ್ಷಸರು ಒಳ್ಳೆಯವರಾ? ಕೆಟ್ಟವರಾ?”  ಹುಡುಗಿಯೊಬ್ಬಳು ನಿಂತು, ’ಕೆಟ್ಟವರು’  ಅಂದಳು. ಮುಖದಲ್ಲಿ ಸರಿ ಉತ್ತರ ಹೇಳಿದ ಹೆಮ್ಮೆ.  ’ ಹಾಗಾದರೆ ಅವರು ಬಂದಿದ್ದೆಲ್ಲಿಂದ?’ ಚಾಲಾಕಿ ಶಿಕ್ಷಕನ ಪ್ರಶ್ನೆ. ಈ ಪ್ರಶ್ನೆಗೂ ಅದೇ ಬಾಲಕಿ ಎದ್ದು ನಿಂತು, ’ದೇವರಿಂದ’ ಅಂದಳು.

ಮತ್ತೆ ಶಿಕ್ಷಕನ ಸರದಿ. ” ದುಷ್ಟ ಶಕ್ತಿ ಎಲ್ಲೆಲ್ಲೂ ಇದೆ, ಮತ್ತು ಅದನ್ನು ದೇವರೇ ಸೃಷ್ಟಿಸ್ತಾನೆ. ಅಂದ ಮೇಲೆ ದುಷ್ಟ ಶಕ್ತಿಯ ಒಡೆಯನೂ ಅವನೇ ಅಲ್ವೇ?”

ಇದಿಯ ತರಗತಿ ಸ್ತಬ್ಧವಾಯ್ತು.ಶಿಕ್ಷಕರು ಮುಂದುವರೆಸ್ತಾ ಚಿಕ್ಕ ಭಾಷಣವನ್ನೇ ಮಾಡಿದರು. ಅನಾರೋಗ್ಯ,ಅಪ್ರಮಾಣಿಕತೆ, ದ್ವೆಷ, ಕುರೂಪಿತನ, ಇವೆಲ್ಲ ರೋಗಿಷ್ಟ ಅಂಶಗಳು ಸಮಾಜದಲ್ಲಿ ಇವೆಯಲ್ಲವೇ? ಇವೆಲ್ಲದರ ಕಾರಣಕರ್ತನೂ ಭಗವಂತನೇ ಅಲ್ವೇ?

ಊಹೂಂ… ಯಾರೊಬ್ಬರಿಂದಲೂ ಉತ್ತರವಿಲ್ಲ. ಭಾಷಣ ಮುಂದುವರೆಯಿತು. ” ವಿಜ್ಞಾನ ಹೇಳುವಮ್ತೆ ಸುತ್ತಲಿನ ಆಗುಹೋಗುಗಳನ್ನು ಅರಿಯಲು ಐದು ಇಂದ್ರಿಯಗಳಿವೆ. ಆ ಇಂದ್ರಿಯಗಳ ಅರಿವಿಗೆ ಬಾರದಿದ್ದದ್ದು ಸತ್ಯವಲ್ಲ. ಈಗ ಹೇಳಿ. ನೀವು ದೇವರನ್ನು ನೋಡಿದ್ದೀರಾ? ಅವನ ಮಾತು ಕೆಳಿದ್ದೀರಾ? ಅವನ ನ್ನು ಮುಟ್ಟಿದ್ದೀರಾ? ಮೂಸಿದ್ದೀರಾ? ನೆಕ್ಕಿರ್ುಚಿ ನೋಡಿದ್ದೀರಾ!?ಶಿಕ್ಷಕನ ದನಿ ಏರುತ್ತ ಹೋಯ್ತು. ಹುಡುಗರುಮ ಮಿಸುಕಾಡಲಿಲ್ಲ.  ಕೊನೆಗೆ ತಾನೇ, ” ವಿಜ್ಞಾನದ ಯಾವ ವಿಧಿ-ವಿಧಾನವೂ ದೆವರ ಇರುವಿಕೆ ಸಾಬೀತುಪಡಿಸುವುದಿಲ್ಲವಾದ್ದರಿಂದ, ದೇವರು ಇರುವುದು ಸಾಧ್ಯವೇ ಇಲ್ಲ!” ಎಂದು ಷರಾ ಬರೆದುಬಿಟ್ಟ.

 ಒಂದರೆ ಕ್ಷಣ ಮೌನ. ಹಿಂದಿನ ಸಾಲಲ್ಲಿ ಕುಳಿತಿದ್ದ ಹುಡುಗ ಮೆಲ್ಲನೆ ಎದ್ದು ನಿಂತು, “ಸಾರ್” ಅಂದ. ಇಡೀ ತರಗತಿ ಅವನತ್ತ ತಿರುಗಿತು. ಹುಡುಗ ಕಣ್ಣಗಲಿಸಿ, ” ಸರ್, ಬಿಸಿ ಅನ್ನೋದು ಇದೆಯಾ? “ಅಂದ.

“ಹೌದು” ಶಿಕ್ಷಕನ ಉತ್ತರ.

“ಮತ್ತೆ… ತಣ್ಣಗಿರೋದು ಅಂತಲೂ ಇದೆಯಾ?”

“ಹೌದು”

ಈಗ ಹುಡುಗ ಕೊಂಚ ದನಿ ಎತ್ತರಿಸಿದ. ” ಅದು ತಪ್ಪು. ತಣ್ಣಗಿರೋದು ಅನ್ನುವ ವಸ್ತು ಯವುದೂ ಇಲ್ಲವೆ ಇಲ್ಲ. ಬಿಸಿ, ಹೆಚ್ಚು ಬಿಸಿ, ಅತೀವ ಬಿಸಿ, ಕಡಿಮೆ ಬಿಸಿ, ಬಿಸಿಯೇ ಅಲ್ಲದ್ದು ಅಂತ ಇದೆಯೆ ಹೊರತು, ತಣ್ಣಗಿರೋದು ಅಂತ ಯವ್ದೂ ಇರೋಲ್ಲ! ತಣ್ಣಗೆ ಅನ್ನೋದನ್ನ ನಾವು ಬಿಸಿಯಲ್ಲದ್ದು ಅನ್ನೋದಕ್ಕೆ ಪರ್ಯಾಯವಾಗಿ ಬಳಸ್ತೀವಿ. ಉಷ್ಣ ಶಕ್ತಿ, ಶೀತ ಶಕ್ತಿಯಲ್ಲ, ವಿರುದ್ಧವೂ ಅಲ್ಲ. …”

ಹುಡುಗ ಹಾಗೆ ವಾದ ಮಾಡ್ತಿದ್ದರೆ, ಶಿಕ್ಷಕರು ಕಣ್ಣರಳಿಸುತ್ತಾ ಕುಳಿತಿದ್ದರು.

ಹುಡುಗ ಮತ್ತೆ ಕೇಳಿದ.” ಕತ್ತಲು ಇದೆಯೇ?”

ಶಿಕ್ಷಕ “ಹೌದು” ಅಂದ.

ಮತ್ತೆ ಹುಡುಗನ ವಾದ. ” ಕತ್ತಲು ಅಂದ್ರೆ, ಬೆಳಕಿಲ್ಲ ಅಂತ ಹೇಳೋದಕ್ಕೆ ಬಳಸೋ ಪದ. ಅದು ಬೆಳಕಿನ ವಿರುದ್ಧ ಪದ ಅಲ್ಲ.”

 ಈಗ ಶಿಕ್ಷಕನ ತಲೆ ಕೆಟ್ಟಿತು. ” ನೀನು ಹೇಳ ಹೊರಟಿರೋದು ಏನು?” ದಬಾಯಿಸಿದರು.

” ಸರ್. ನಿಮ್ಮ ತರ್ಕದ ಸರಕು ಮುಗಿದಿದೆ. ನಿಮ್ಮ ವಿಜ್ಞಾನ ಅಯಸ್ಕಾಂತದ ಆಕರ್ಷಣೆಯನ್ನು ನೋಡಿದೆಯೇ? ಆದರೆ ಅದನ್ನು ಬಳಸುತ್ತೀರಲ್ಲ, ಹೇಗೆ? ವಿದ್ಯುತ್ತಿನ ಬಣ್ಣ, ರೂಪಗಳನ್ನು ಕಂಡವರುಂಟೇ? ಮೂಸಿದವರುಂಟೇ? ಋಚಿ ನೋಡಿದವರುಂಟೇ?  ಆದರು ವಿದ್ಯುಚ್ಚಕ್ತಿಯನ್ನು ನಂಬುತ್ತೀರಲ್ಲ, ಬಳಸುತ್ತೀರಲ್ಲ? ಹೇಗೆ?  ಸಾವನ್ನು ಬದುಕಿನ ವಿರುದ್ಧ ಪದ ಅಂತ ತಿಳಿಯೋದು ಮೂರ್ಖತನವಲ್ಲವೇ?

ಶಿಕ್ಷಕನಿಗೆ ತಾನು ಸೋಲುತ್ತಿರುವ ಅರಿವಾಯಿತು.  ಹುಡುಗ ಧೈರ್ಯದಿಂದ ಮುಂದುವರೆದ.

ಇಲ್ಲಿ ನೀವು ಯಾರಾದರೂ ನಮ್ಮ ಶಿಕ್ಷಕರ ಮೆದುಳು ನೋಡಿದ್ದೀರಾ? “

ಶಾಲೆಗೆ ಶಾಲೆಯೇ ಬಿದ್ದು ಬಿದ್ದು ನಗತೊಡಗಿತು. ” ಅವರ ಮೆದುಳಿನ ಅಂದ- ಆಕಾರ ಕಂಡಿದ್ದೀರಾ? ಋಚಿ ನೋದಿದ್ದೀರಾ?”  ನಮ್ಮ ಪಂಚೇಂದ್ರಿಯಗಳಿಗೆ ನಿಲುಕದ ಮೆದುಳು ಅವರಿಗೆ ಎಂದು ತಿಳಿಯುವುದರೂ ಹೇಗೆ?”

” ಅದು ನಂಬಿಕೆ” ಶಿಕ್ಷಕ ಬಾಯಿ ಹಾಕಿದ. ಅದಕ್ಕೇ ಕಾಯುತ್ತಿದ್ದವನಂತೆ ಹುಡುಗ ತತ್ ಕ್ಷಣ ಹೇಳಿದ, ” ಮಾನವ ಮತ್ತು ದೇವರ ನಡುವೆ ಇರುವುದೂ ಅದೇ ನಂಬಿಕೆ!”

ಈಗ ಶಿಕ್ಷಕನ ಸಮರ್ಥನೆಗೆ ಮಾತುಗಳೇ ಉಳಿದಿರಲಿಲ್ಲ. ವಿದ್ಯಾರ್ಥಿ ಹೇಳಿದ ಹಾಗೆ, ಅವನ ತರ್ಕದ ಸರಕು ಮುಗಿದಿತ್ತು.

ಹೀಗೆ ಅತ್ಯಂತ ಶಿಸ್ತುಬದ್ಧ ವಾದ ಸರಣಿಯಿಂದ ಶಿಕ್ಷಕನ ಬಾಯ್ಮುಚ್ಚಿಸಿ ದೇವರ ಇರುವಿಕೆಯನ್ನ ಎತ್ತಿಹಿಡಿದವರು ಯಾರು ಗೊತ್ತೇ? ಅವರು ’ ಆಲ್ಬರ್ಟ್ ಐನ್’ ಸ್ಟೀನ್!

ವಿಜ್ಞಾನ ಜಗತ್ತಿನಲ್ಲಿ ಅಪ್ರತಿಮ ಸಾಧನೆ ಮಾಡಿದ ಐನ್ ಸ್ಟೀನ್, ಎಂದೂ ದೇವರನ್ನು ಹಳಿದವನಲ್ಲ. ಅವನು ಮಾತ್ರವಲ್ಲ, ನಿಜವಾದ ವಿಜ್ಞಾನಿಗಳೆಲ್ಲರಿಗೂ ವಿಜ್ಞಾನದ, ಮಾನವನ ಮಿತಿಗಳ ಅರಿವಿರುತ್ತದೆ. ಹೀಗಾಗಿಯೇ ಬಹುತೇಕ ಸುಪ್ರಸಿದ್ಧ ವಿಜ್ಞಾನಿಗಳು ಆಸ್ತಿಕರು. ಶ್ರದ್ಧಾವಂತರು. ಆದರೆ ಅರೆ ಬೆಂದ ನಮಗೆ ಅದು ಅರ್ಥವಾಗೋದೇ ಇಲ್ಲ. ಯಂತ್ರಗಳು, ಭೂಗೋಳ- ಖಗೋಳಗಳು, ಆವಿಶ್ಕಾರಗಳಷ್ಟೇ ವಿಜ್ಞಾನ ಅನ್ನುವ ಭಾವನೆ ನಮ್ಮದು ರೈತ ಹೊಲ ಉಳುವಾಗ ನೇಗಿಲೆಳೆಯುವುದೂ ವಿಜ್ಞಾನ ಅನ್ನೋದನ್ನ ಅರಗಿಸಿಕೊಳ್ಳಲು ನಮ್ಮಿಂದಾಗದು. ಕಡಿದಾದ ರಸ್ತೆಯಲ್ಲಿ ಗಾಡಿ ಓಡಿಸುವವ ಬಾಗೋದು ಸೆಂಟ್ರಿಫ್ಯುಗಲ್ ಫೋರ್ಸಿಗೆ ಉದಾಹರಣೆ ಅಂದರೆ ತೃಪ್ತಿಯಾಗದು. ನಮ್ಮ ಪಾಲಿಗೆ ವಿಜ್ಞಾನ, ದೈನಂದಿನ ಜಗತ್ತಿಗೆ ದೂರವಿರುವ, ಆವಿಷ್ಕಾರಗಳ ಸಿದ್ಧಾಂತ. ವಿಜ್ಞಾನ- ಶುದ್ಧ ನಾಸ್ತಿಕವಾದ!

ಐನ್ ಸ್ಟೀನ್ ನನ್ನು, ಅವನಂಥ ಶ್ರದ್ಧಾ-ವಿಚಾರವಂತ ವಿಜ್ಞಾನಿಗಳನ್ನು ಸಾಕಷ್ಟು ನೋಡಿದ್ದರೂ, ಈಗಲೂ ನೋಡುತ್ತಿದ್ದರೂ ನಮಗೆ ಮಾತ್ರ ಬುದ್ಧಿ ಬರುವುದೇ ಇಲ್ಲ. ನಾವು, ತುಂಬಿದ ಕೊಡಗಳಾಗಲು ಸಾಧ್ಯವೇ ಇಲ್ಲ!!

 ಚಕ್ರವರ್ತಿ ಸೂಲಿಬೆಲೆ ಬರಹ ಸಂಗ್ರಹದಿಂದ ಕದ್ದಿದ್ದು.

September 24, 2007

ಟ್ವೆಂಟಿ- ಟ್ವೆಂಟಿ ಮತ್ತು ತುಂಟ ತಂಗಿ

Filed under: ಹೀಗೇ ಸುಮ್ನೆ.. — jeevadani @ 5:10 pm

ಆಫೀಸಿಂದ ಹೊರಟು ನಿಂತರೆ ಸದಾ ಗಿಜಿಗುಡೋ ರಸ್ತೆ ಬಿಕೋ ಅಂತ ಅಂಗಾತ ಬಿದ್ದುಕೊಂಡಿತ್ತು. ಒಂದರೆ ಗಳಿಗೆಯಲ್ಲಿ ವಯಸ್ಸಾದ ರಾಜಕಾರಣಿಗಳೆಲ್ಲ ಕಣ್ಣೆದುರು ಹಾದುಹೋದರು. ಸಾಲದ್ದಕ್ಕೆ ರಾಮಸೇತು ಗಲಾಟೆ ಬೇರೆ. ರಾಮ ರಾಮಾ…ಅಂದುಕೊಳ್ತಲೇ ಆಗೊಂದು ಈಗೊಂದು ಭರ್ರೆದು ಕುಂಡೆ ತಿರುಗಿಸಿ ಹೋಗ್ತಿದ್ದ ಆಟೋಗಳಿಗೆ ಕೈಯ್ಯೊಡ್ಡುತ್ತ ನಿಂತೆ.

ಮಿನಿಮಮ್ ದೂರದ ಮನೆಗೆ ಇಪ್ಪತ್ತು ಕೊಡಿ ಅಂತ ನಖರಾ ಆಡ್ತಿದ್ದವರಿಗೆಲ್ಲ ಹೆಂಡ್ತಿ ಲಟ್ಟಣಿಗೇಲಿ ಬಡೀಲಿ ಅಂತ ಶಾಪ ಹಾಕ್ತಾ, ಎಲ್ಲಾದಕ್ಕೂ “ಹೇಣ್ತಿ ಹೆಣ್ ಹಡಿಯಾ” ಅಂತ ಬೈತಿದ್ದ ಮಾವನ್ನ ನೆನೆಸ್ಕೊಂಡು ಅವರಿಗೆ ತಕ್ಕ ಅಳಿಯನಾಗ್ತಾ, ಧಿಕ್ಕಾರಕ್ಕೆ ಹೆದರಿ ಅದನ್ನ ಮನಸ್ಸಲ್ಲೇ ಗೊಣಗಿಕೊಳ್ತಾ ನಿಂತುಕೊಂಡಿದ್ದೆ. ಆದರೂ ಸಮಸ್ಯೆ ಬಗೆಹರಿದಿರಲಿಲ್ಲ. ಬೆಂಗಳೂರಿನಂಥಾ ಬೆಂಗಳೂರಿನ ಈ ಗಿಜಿಗುಡುವ ರಸ್ತೆ ಇವತ್ಯಾಕೆ ಅನಾಥವಾಗಿ ಬಿದ್ದಿದೆ?

ಅಂತೂ ಕುತ್ತಿಗೆ ಸುತ್ತ ಮಫ್ಲರ್ ಸುತ್ತಿಕೊಂಡ ಯುವ ಆಟೋದವ ನನ್ನ ಮೇಲೆ ಕರುಣಿ ತೋರಿಸ್ದ. “ಮ್…ಇವಂಗೆ ಗಂಡೇ ಹುಟ್ಟೋದು!” ಎಲ್ಲೋ ಎದ್ದ ದನಿ, ಅಲ್ಲೇ ಉಶ್ ಉಶ್ ಆಗಿಹೋಯ್ತು. ಲೈಸೆನ್ಸ್ ಡಿಸ್ಪ್ಲೇ ಕಾರ್ಡಿನ ಮೇಲೆ ಆವೇದ ಅಂತ ಹೆಸರಿತ್ತು. ನನ್ನ ೧೯೪೨ ಜಮಾನಾದ ಹೆಸರಿಗೆ ಹೇಸಿ, ಅವನ ಮೇಲೆ ಲೈಟಾಗಿ ಹೊಟ್ಟೆಕಿಚ್ಚಾಯ್ತು! 

ಎಂಥದೋ ಲಹರಿಗೆ ಬಿದ್ದು ಗುನುಗುತ್ತಿದ್ದವ ಇದ್ದಕ್ಕಿಧಾಗೇ ಹಾಡು ನಿಲ್ಲಿಸಿ ಅಂದ. ” ಬಡ್ಡೀ ಮಕ್ಳು ಇವತ್ತು ಸೋಲ್ಬೇಕು ಸಾರ್!” ಏನೋ ಚೂರು ಚೂರು ನೆನಪಾಯ್ತು… ಅರೆ! ಇವತ್ತು ೨೦-೨೦ ವರ್ಲ್ಡ್ ಕಪ್ ಫೈನಲ್!!  

“ಸಾಯಕ್ಕೆ… ಒಂದೇ ಒಂದ್ ಹುಳ ಇಲ್ಲ ರೋಡಲ್ಲಿ. ನೋಡಿ ಸಾರ್, ಅಲ್ನೋಡಿ, ಹೆಂಗ್ ಜನ ಆ ಅಂಗ್ಡೀಲ್ ತುಂಬ್ಕೊಂಡಿದಾರೆ ಅಂತ!?”

ತಥ್! ನಾಳೆ ಸಿಗಬಹುದಾಗಿದ್ದ ರಜೆಗೆ ಕಲ್ಲು ಬಿದ್ದಿತ್ತು. ಯಾರೂ ಸತ್ತಿರಲಿಲ್ಲ. ಎಲ್ಲೂ ಯಾವ ಗಲಭೆಯೂ ಸದ್ದು ಮಾಡಿರಲಿಲ್ಲ. ಆಟೋ ಹುಡುಗ ಸ್ವಲ್ಪ ಕೂಡ ಚೌಕಶಿ ಮಾಡದಿದ್ದದ್ದು ಖುಶಿಯಾಯ್ತು. ಅಂವ ಚಿಲ್ಲರೆ ಹುಡುಕುವ ನೆವ ತೆಗೆಯುತ್ತಿದ್ದಾಗ, ಏನೋ ಹುಕ್ಕಿ ಬಂದು, “ಇರ್ಲಿ ಬಿಡು” ಹೇಳಿದೆ.

ತಂಗಿ ಮಾಮೂಲಿನಂತೆ ಕಾಯಿ ತುರಿಯದ, ತಿರುವಿ ಹಾಕದ ಮಿಶ್ರ ತರಕಾರಿಯ ಹುಳಿ ಮಾಡ್ತಿದ್ದಳು. ಅವಳ ಕುಕ್ಕರು ಕೂಗೋದಕ್ಕೂ ಇದ್ದಕ್ಕಿದ್ ಹಾಗೇ ಢಮ್ ಅನ್ನೋದಕ್ಕೂ ಸರಿಯಾಯ್ತು. ಅದು ಪಟಾಕಿ ಸದ್ದು! ಕಾಲು ಗಂಟೆ ಪೂರ್ತಿ ಕಿವಿ ಕಿತ್ತು ಹೋಗೋ ಸದ್ದು. ಕ್ರಿಕೆಟ್ ಅಂದ್ರೆ ಸಾಕು ಕಿಡಿಕಾರ್ತಿದ್ದ ತಂಗಿ, ಹೊಸತಾಗಿ ’ಚಕ್ ದೇ’ ನೋಡಿ ಬಂದಿದ್ದಳು. ” ಗೆದ್ವು ಮುಂಡೇವು!” ಹುಳ್ಳಗೆ ನಕ್ಕಳು.

“ಹಾಕೀ ಮೆ ಚಕ್ಕೇ ನಹೀಂ ಹೋತೆ”  ಶಾರುಖ್ ಡೈಲಾಗು ನೆನಪಾಯ್ತು. ಜೊತೆಗೆ ಚಿತ್ರ ಪ್ರಭದಲ್ಲಿ ನೋಡಿದ ಟೈಟಲ್ಲು- ’ಹೆತ್ತರೆ ಹೆಣ್ಣನ್ನೇ ಹೆರಬೇಕು’. ತಂಗಿ ಮೇಲೆ ಅಕ್ಕರೆ ಉಕ್ಕಿತು.

“ಬಾರೇ ಪಾನಿಪೂರಿ ತಿನ್ನಿಸ್ತೀನಿ” ಅನ್ನುತ್ತ ಎದ್ದು ನಿಂತೆ. ಅವಳು ಸ್ವರ್ಗ ಸಿಕ್ಕ ಹಾಗೆ ಅಷ್ಟಗಲ ನಕ್ಕಳು.

September 23, 2007

ನಗ್ಬೇಕೂಂದ್ರೆ ಮದ್ವೆ ಆಗ್ಬೇಕು, ಅಂದು ಕಣ್ಣೊರೆಸಿಕೊಂಡ!

Filed under: ಗಂಡಸ್ರ ಗೋಳು! — jeevadani @ 12:12 pm

ಚಂದಿರ

ಚಂದಿರ 

ಅವನ ನಗುವಿನ ಹಿಂದೆ ವಿಪರೀತ ದುಃಖ ಇದೆ ಅಂತ ನನಗೆ ಮಾತ್ರ ಅನ್ನಿಸ್ತಿತ್ತು. ಅದನ್ನ ಗೆಳೆಯರಿಗೆ ಹೇಳಿದ್ರೆ ನಕ್ಕುಬಿಡ್ತಿದ್ರು, “ನಿಂಗೆ ಯಾವಾಗ್ಲೂ ಅನುಮಾನ. ನೀನು ಇಂಟೆಲಿಜೆನ್ಸ್ ಗ್ರೂಪ್ನಲ್ಲಿರಬೇಕಿತ್ತು” ಅಂತ ಕಿಚಾಯಿಸ್ತಲೇ ಇರ್ತಿದ್ರು. ನಾನೂ ಸುಮ್ಮನಾಗಿಬಿಡ್ತಿದ್ದೆ.

ಮೊನ್ನೆ ಮಾತ್ರ ನನ್ನಿಂದ ಸುಮ್ಮನಿರಲಿಕ್ಕಾಗಲೇ ಇಲ್ಲ. ಘಟ್ಟದ ಕಡಿದಾದ ರಸ್ತೆಯಲ್ಲಿ ನಮ್ಮ ಗಾಡಿ ದಾಟುವಾಗ ರಾತ್ರಿ ಒಂದೂವರೆ. ಜೊತೆಗಿದ್ದವರಿಗೆಲ್ಲ ಕಂಠಮಟ್ಟ ನಿದ್ದೆ, ಅಷ್ಟೇ ಎಣ್ಣೆ. ‘ ರಾತ್ರಿ ಎಲ್ರೂ ಮಲಗಿಬಿಡಬೇಡ್ರೋ, ಡ್ರೈವರ್ರೂ ತಾಚಿ ಮಾಡಿಬಿಡ್ತಾನೆ! ಆಮೇಲೆ, ಬೆಳಗ್ಗೆ ಶೂಟಿಂಗೂ ಇಲ್ಲ… ಷರಟಿಂಗೂ ಇಲ್ಲ!!’ ಅಂದಿದ್ರು ಪ್ರೊಡ್ಯೂಸರ್ರು. ಅದಕ್ಕೇ, ಘಟ್ಟದ ಬೋರು ಬೋರು ರಸ್ತೇಲೂ ಡ್ರೈವರ್ ಮಹೇಶಂಗೆ ಸಾಥ್ ಕೊಡೋದಕ್ಕೆ ನಾನು ಗಂಟು ಬಿದ್ದಿದ್ದೆ.

ಮೊಬೈಲ್ ರಿಂಗಾಯ್ತು. ಸರಿಯಲ್ಲದ ಹೊತ್ನಲ್ಲಿ ಹೆಂಡ್ತಿ ಕರೆ ಮಾಡೋಲ್ಲ. ಎಲ್ರೂ ಮಲಗಿರೋ ಹೊತ್ತು, ಕರರಕರೆ ಮಾಡೋದು ಸೆಟ್ ಅಪ್ ಗಳೇ! ಮಹೇಶನತ್ತ ತಿರುಗಿದೆ. ಅವನ ಕಂಗಳಲ್ಲಿ ಮುಚ್ಚಿಡಲೆತ್ನಿಸುವ ಭಯಾನಕ ಅಸಹನೆ. ನೀವೆಣಿಸೋ ಅಂಥಾದ್ದೇನಿಲ್ಲ ಬಿಡಿ! ಅನ್ನುವ ಭಾವ. ಆಮೇಲೆ ಭಾಳ ಹೊತ್ತು ಗಾಡಿ ಓಡಿಸ್ಲಿಲ್ಲ. ಸ್ವಲ್ಪ ದೂರದಲ್ಲೇ ಕಾರಿಂದ ಇಳಿದು, ಬದಿಗೆ ಬಂದು ನಿಂತ. ಪಾಪಿ! ಸಿಗರೇಟೂ ಸೇದದವನು!! ನಾನೇ ಒಂದು ದಮ್ ಎಳೆದು, ಅವನ ನಗುವಿನ ಹಿಂದಿದ್ದ ಅಳುವನ್ನ ಕೆಣಕಿದೆ. ಮಹೇಶ ಬಿಕ್ಕಿ ಬಿಕ್ಕಿ ಅತ್ತುಬಿಟ್ಟ.

ಮನೆಗೆಲಸಕ್ಕೆ ಬರತಿದ್ದ ತಾಯಮ್ಮನ ಮುದ್ದಾದ ಮಗಳು ಚಂದ್ರಿಯ ಬಗ್ಗೆ ಹೇಳಿದ. ಅವಳೊಡನೆ ತಾನು ನೋಡಿದ ಒಂದೇ ಒಂದು ಸಿನೆಮಾ ಬಗ್ಗೆ ಹೇಳಿದ. ಕೊನೆಗೆ, ಅಮ್ಮ ಸಾಯುವಾಗ ಅಣ್ಣನ ಮಗಳನ್ನೇ ಮದುವೆಯಾಗೋದಾಗಿ ಮಾತು ತೊಗೊಂಡಿದ್ದು,  ಅಮ್ಮ ಹೇಳಿದಾಳೆ ಅಂತ ಹಳ್ಳಕ್ಕೆ ಬೀಳ್ಬೇಡ   ಅಂತ ತಮ್ಮ ಹೇಳಿದ್ದು, ಚಂದ್ರಿಯ ಕ್ಷಮೆ ಕೇಳಿ ಮಾವನ ಮಗಳಿಗೆ ತಾಳಿ ಕಟ್ಟಿದ್ದು, ಎಲ್ಲವನ್ನೂ ಹೇಳಿಕೊಂಡ.  ಅವತ್ತು ಚಂದ್ರಿಯ ಕಂಗಳು ನಿಗಿನಿಗಿ ಕೆಂಡವಾಗಿದ್ದನ್ನ ನೆನಸ್ಕೊಂಡ.

ಎಲ್ಲ ಸರಿ ಹೋಯ್ತಲ್ಲ? ಮತ್ಯಾಕ್ ನೋವು? ಅಂದಿದ್ದಕ್ಕೆ, ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ.

ಮೊದಲ ರಾತ್ರಿ ದಿವ್ಯ ರಾತ್ರಿ. ಆಸೆ- ಆಶೋತ್ತರಗಳ ಕಲಸುಮೇಲೋಗರ ಅದು. ಎಷ್ಟೋ ದಿನ ಅಮುಕಿಕೊಂಡಿದ್ದ ಕನಸು ಪೂರ್ಣವಾಗೋ ದಿನ. ಪೂರ್ ಮಹೇಶ! ಹಾಸಿಗೆ ಮೇಲೆ ಬಿಕ್ಕಿ ಬಿಕ್ಕಿ ಅಳುತ್ತ ಕೂತ ಹೆಂಡತಿ…. ಮುಟ್ಟಿದರೆ ಚೀರುತಿದ್ದವಳು.  ಮಹೇಶ ಹೈರಾಣಾದ. ಮೊದಲ ರಾತ್ರಿ, ನೆಲದ ರಾತ್ರಿಯಾಯ್ತು. ಹಾಲು, ಸೇಬು, ಚೆಲ್ಲಾಪಿಲ್ಲಿಯಾದ ಹೂವಿನ ಹಾಸಿಗೆ, ಬೆಳಗಿನ ಜಾವದ ಮೈಮುರಿತ, ಎಲ್ಲವೂ ಕನಸಾಗಿಯೇ ಉಳಿಯಿತು.

ಅವನೂ ಕಾರಣ ಕೇಳಲಿಲ್ಲ. ಅವಳೂ ಹೇಳಲಿಲ್ಲ. ಬೆಳಗ್ಗೆ ಮನೆಯಿಂದ ಹೊರಟವನು ಸಂಜೆ ವಾಪಸು ಬರತಿದ್ದ. ‘ ನೀರು ಕಾಯಿಸ್ಲಾ? ಆಕೆ ಕೇಳ್ತಿದ್ದಳು. ಆಕಾಶ ನೋಡುತ್ತ ಹುಂ ಗುಟ್ಟುತ್ತಿದ್ದ.

ಊಟ? ಕೇಳಿದರೆ, ‘ಊಹೂಂ’ ಅಂತಿದ್ದ. ಎಣಿಸಿಟ್ಟರೆ ನಾಲ್ಕೇ ಮಾತು.

ಕಾರಿನ ಮಿರರಿನಲ್ಲಿ ಕೈಕೈ ಹಿಡಿದು ಪಿಸುಗುಟ್ಟುವ ಜೋಡಿಗಳು! ಕಂಡಾಗೆಲ್ಲ ಮಹೇಶನ ಜೀವ ಝಲ್ಲೆನ್ನುತ್ತಿತ್ತು. ತನ್ನ ರೋಮ ನಿಮಿರಿ ನಿಲ್ಲಿಸುವ ಅವಳಿಲ್ಲದೇ ಖಿನ್ನನಾಗುತ್ತಿದ್ದ. ಬರೀ ಪ್ರಶ್ನೆಗಳು. ನಿದ್ರೆಗೆ ಜಾರುವುದೊಂದೇ ಉತ್ತರವೆನಿಸಿತು.

ಆಸ್ಪತ್ರೆಯ ಹಾಸಿಗೆ ಮೇಲೆ ಬಿದ್ದುಕೊಂಡವನಿಗೆ, ಅಸ್ಪಷ್ಟವಾಗಿ ಕೇಳ್ತಿತ್ತು. ಒಟ್ಟು ಮೂವತ್ತೆಂಟು ಮಾತ್ರೆಗಳು. ಬದುಕಿದ್ದೇ ಪುಣ್ಯ!

ಮನೇಲಿ ರಾದ್ಧಾಂತ. ನಾನು ಮೊದ್ಲೇ ಹೇಳಿರಲಿಲ್ವಾ? ಅಂದ ತಮ್ಮ.  ಅತ್ತೆ- ಮಾವ ಮಗಳಿಗೆ ಬುದ್ಧಿವಾದ ಹೇಳಿದರು.

ಇವಳನ್ನ ಮದುವೆಯಾಗಿ ನಾನು ಷಂಡನಾದೆ. ನಾಲ್ಕು ವರ್ಷವಾದ್ರೂ ಒಂದು ಮಗುವಿಲ್ಲ. ಎಲ್ರೂ ಛೇಡಿಸ್ತಿದ್ದಾರೆ ಅಂದ. ಅವಳು ಎದ್ದಳು. ಅಷ್ಟೇ ತಾನೆ? ಬಾ ಮಲಗ್ತೀನಿ. ಮಗು ಕೊಟ್ ಬಿಡು ಅಂದ್ಲು. ಯಾರಿಗೆಷ್ಟು ಅರ್ಥವಾಯ್ತೋ? ಸಮಸ್ಯೆ ತೀರ್ತು ಅಂತ ಚೆನ್ನಾಗಿ ಉಂಡು ಹೊರಟ್ರು.

ಅವತ್ತು ರಾತ್ರಿ… ಅದೇನು ಮೊದಲ ರಾತ್ರಿಯಲ್ಲ. ಅವನು ಮೊದಲೇ ಹಾಸಿಗೆ ಮೇಲೆ ಬಿದ್ದುಕೊಂಡ. ಅರ್ಧ ಮಂಚ ಆಕ್ರಮಿಸಿ. ಅವಳು, ಅವನ ಪಕ್ಕದಲ್ಲೇ ಬಿದ್ದುಕೊಂಡಳು. ಅವನಾಗಿಯೇ ಮುಟ್ಟಲಿಲ್ಲ. ಅವಳೇ ಕೆಣಕಿದಳು. ಮಗು ಬೇಕಂದ್ಯಲ್ಲಾ! ಕೊಡು ಬಾ!!

ಅದಕ್ಕೇ ಕಾಯ್ತಿದ್ದೋನಂತೆ, ಭೋರ್ಗರೆದ, ಬಸವಳಿದು ಬಿದ್ದ.

ನಾನು ಗಾಬರಿಯಾಗಿ ನಿಂತಿದ್ದೆ. ” ಸಾರ್… ಹೆಣವನ್ನೂ ಸಂಭೋಗಿಸಬಹುದು ಗೊತ್ತಾ? ” ನಾನು ಬಿಟ್ಟ ಕಣ್ಣು ಬಿಟ್ಟೇ ಇದ್ದೆ. ” ನಾನು ಅವತ್ತು ಅದನ್ನೇ ಮಾಡಿದ್ದು.” ” ಯಾವ ಜನ್ಮದ ಪುಣ್ಯವೋ? ನನ್ನ ಶ್ರಮದ ಒಂದು ಕಣ ಅವಳ ಗರ್ಭ ಸೇರ್ತು. ನಾನೂ ಅಪ್ಪನಾದೆ! ಹೆರಿಗೆಯಾಗಿ ಈವತ್ತಿಗೆ ಹದಿನೈದು ದಿನ. ಏನಾದ್ರೂ ಬೇಕಿದ್ರೆ ಫೋನ್ ಮಾಡು ಕಳಿಸಿಕೊಡ್ತೀನಿ ಅಂದಿದ್ದೆ. ಒಣ ಜಂಭ ಬೇರೆ. ಯಾರೂ ಇಲ್ಲದ ಹೊತ್ನಲ್ಲಿ ಹೀಗೆ ಕಾಲ್ ಮಾಡ್ತಾಳೆ.”

“ಎಲ್ಲಾ ಚಂದ್ರಿಯ ಶಾಪ ಸಾರ್”.

ಸಿಗರೇಟು ಮುಗಿದು ತುಟಿ ಸುಟ್ಟಿತು. 

ಮದುವೆ ಆಗ್ಬೇಕು ಸಾರ್. ಆಗ ಒಳಗಿನ ದುಃಖ ಕರಗಿಹೋಗತ್ತೆ. ನಗದೇ ಬೇರೆ  ದಾರಿಯೇ ಇರೋಲ್ಲ! ಅಂದವನು ನಗು ನಗುತ್ತಲೇ ಗಾಡಿ ಹತ್ತಿದ. ನಾನೂ ಕೂಡಾ. ಆದ್ರೆ ಈಗ, ಮಲಗ್ಬೇಕಂದ್ರೂ ನಿದ್ದೆಯೇ ಬರಲಿಲ್ಲ. . . . .

ನಿಮಗೂ ಒಂದು ಮೈಕು…

Filed under: ಫ್ರೀ ಲಾನ್ಸ್ — jeevadani @ 9:53 am

ಸುಮ್ನೆ ಏನೂಂತ ಬರೆಯೋದು? ಹಾಗಂತ ಬರೀದೇ ಇರೋಕಾಗುತ್ತಾ?

ಯಾವ್ಯಾವ್ದೋ ಭಾವಗಳಿಗೆ ಭಾಷೆಯ ರೂಪ ಕೊಟ್ಟಾಗ್ಲೇ ಮನಸಿಗೆ ಒಂಥರಾ ಸಮಾಧಾನ.

ಅದಕ್ಕೇ ಈ ಕಾಲಂ.

ನೀವೂ ಬರೀಬಹುದು.

ಛೆ! ನೀವೇ ಬರೀಬೇಕು.. ಇದು ಫ್ರೀಲಾನ್ಸ್!

ಬಳಗದ ಗೆಳೆಯ

« Previous PageNext Page »

Blog at WordPress.com.