Archive for the ‘ಪುರಾಣ’ Category

ಭೂಮಿಯಲ್ಲಿ ಋಷಿಗಳು ತಪಸ್ಸಿಗೆ ಕುಳಿತರೆ ಸಾಕು, ಇಂದ್ರ ಸಿಂಹಾಸನಕ್ಕೆ ನಡುಕ! ಪ್ರತಿ ಬಾರಿಯೂ ಇಂಥದನ್ನು ತಡೆಯಲು ಆತ ತನ್ನ ಅಪ್ಸರೆಯರನ್ನು ಅವರತ್ತ ಕಳುಹಿಸಿ ತಪೋಭಂಗ ಮಾಡುತ್ತಿದ್ದ. ಈ ಬಗೆಯ ಕಥೆಗಳಲ್ಲಿ ವಿಶ್ವಾಮಿತ್ರನ ತಪೋಭಂಗದ ಕಥೆ ಅತಿ ಜನಪ್ರಿಯ. ಅಂಥದೇ ಇಲ್ಲಿ, ಮತ್ತೊಂದು…

ಹೀಗೊಬ್ಬನಿದ್ದ ಕಂಡು ಮಹರ್ಷಿ. ಆತನೂ ಒಮ್ಮೆ ತಪಸ್ಸಿಗೆ ಕುಂತ. ಹೆದರಿದ ಇಂದ್ರ ಪ್ರಮ್ಲೋಚೆ ಎಂಬ ಅಪ್ಸರೆಯನ್ನು ತಪಸ್ಸು ಕೆಡಿಸಲೆಂದೇ ಕಳಿಸಿಕೊಟ್ಟ. ಪ್ರಮ್ಲೋಚೆಯ ರೂಪ ಲಾವಣ್ಯ ಕಂಡು ಮುನಿಯನ್ನು ಸೆಳೆದವು. ಇಂದ್ರನ ತಂತ್ರ ನೆರವೆರಿತು, ಪ್ರಮ್ಲೋಚೆಯಲ್ಲಿ ಮುನಿಯ  ತಪೋಸಂಚಯ ನಷ್ಟವಾಯಿತು. ಇಂಥ ದಿವ್ಯ ವೀರ್ಯದಿಂದ ಅತ್ಯದ್ಭುತ ಲಾವಣ್ಯದ ಹೆಣ್ಣು ಶಿಶು ಜನಿಸಿತು. ಎಂದಿನಂತೆ ಅಪ್ಸರೆ ಮಗುವನ್ನು ಅಲ್ಲಿಯೇ ಬಿಟ್ಟು ಹೊರಟುಹೋದಳು. ಇತ್ತ ಕಂಡು ಮುನಿ, ತನ್ನ ಶಕ್ತಿಯನ್ನು ಪುನಃ ಸಂಪಾದಿಸಲು ತಪಸ್ಸಿಗೆ ಕುಂತುಬಿಟ್ಟ.

ತಂದೆ ತಾಯಿಯರ ಉಪೇಕ್ಷೆಗೆ ಒಳಗಾದ ಮಗು ಕಾಡಿನಲ್ಲಿ ಒಂಟಿಯಾಗಿ ಹಸಿವು, ಚಳಿ ಗಾಳಿಯಿಂದ ತತ್ತರಿಸಿ ಒಂದೇಸಮನೆ ಅಳತೊಡಗಿತು. ಈ ಮಗುವನ್ನು ಕಂಡ ಚಂದ್ರದೇವ ತನ್ನ ಅಮೃತ ಕಿರಣಗಳನ್ನು ಊಡಿ ಮಗುವನ್ನು ಸಾಂತ್ವನಗೊಳಿಸಿದ. ತನ್ನ ಆಜ್ಞಾಪಾಲಕರಾದ ವೃಕ್ಷದೇವತೆಗಳಿಗೆ ಮಗುವಿನ ಪೋಷಣೆಯ ಜವಾಬ್ದಾರಿ ಕೊಟ್ಟ. ಹೀಗೆ ಕಂಡು- ಪ್ರಮ್ಲೋಚೆಯರ ಮಗಳಾದ ‘ಮಾರಿಷೆ’ಯು ವನದೇವಿಯ ಮಡಿಲಲ್ಲಿ ಬೆಳೆಯತೊಡಗಿದಳು.

ಪ್ರಾಚೀನ ಬರ್ಹಿ ಎಂಬೊಬ್ಬ ರಾಜನದು ಬೇರೆಯೇ ಕಥೆ. ಅದಿನ್ನೂ ದೊಡ್ಡ ಕಥೆ. ಅವನ ಹತ್ತು ಮಕ್ಕಳ ಹೆಸರೂ ’ಪ್ರಚೇತ’ರೆಂದೇ. ಆ ಮಕ್ಕಳು ಕೂಡ ತಪೋಸಂಪನ್ನರು. ಬ್ರಹ್ಮನ ಆದೇಶದ ಮೇರೆಗೆ ಆ ಹತ್ತೂ ಸಹೋದರರು  ಮಾರಿಷೆಯನ್ನು ಮದುವೆಯಾದರು!

ಮುಂದೆ ಮಾರಿಷೆಯ ಗರ್ಭದಲ್ಲಿ ಪ್ರಚೇತರು ’ದಕ್ಷ’ನನ್ನು ಪಡೆದರು.  ದಕ್ಷ, ಭೂಲೋಕದಲ್ಲಿ ಮಾನವ ಸಂತಾನವನ್ನು ವ್ಯಾಪಕಗೊಳಿಸಿ, ’ಪ್ರಜಾಪತಿ’ ಅನಿಸಿಕೊಂಡನು.

ಈತ ಹಿಂದೆ ದಾಕ್ಷಾಯಣಿಯ ತಂದೆಯಾಗಿ, ಅವಳ ಆತ್ಮಾಹುತಿಗೆ ಕಾರಣನಾಗಿ ಶಿವನಿಂದ ದಂಡನೆಗೊಳಗಾಗಿದ್ದನಲ್ಲ, ಅದೇ ದಕ್ಷ. ಶಿವ ಶಾಪದಿಂದ ಮತ್ತೆ ಭೂಮಿಯಲ್ಲಿ ಹುಟ್ಟಿಬಂದ. ಶಪಿತನಾದರೂ ಆತ ಬ್ರಹ್ಮನ ಮಗನಲ್ಲವೇ? ಭೂಮಿಯಲ್ಲಿ ಹುಟ್ಟಲು ಆತನಿಗೆ ಸತ್ತ್ವಯುತ ಕ್ಷೇತ್ರವೇ ಆಗಬೇಕಿತ್ತು. ಅದಕ್ಕೆಂದೇ ಕಂಡು-ಪ್ರಮ್ಲೋಚೆಯರ ಪ್ರಹಸನವನ್ನು ನಿಯತಿ ಏರ್ಪಡಿಸಿದ್ದಳು!

ಮುಂದೆ ಹತ್ತು ಮಂದಿ ಪ್ರಚೇತರು ಮಾರಿಷೆಯಲ್ಲಿ ವೀರ್ಯ ಪ್ರತಿಷ್ಟಾಪಿಸಿ ದಕ್ಷನನ್ನು ಪಡೆದರು.

ಈ ಕಥೆ ಭಾಗವತ ಪುರಾಣದ ನಾಲ್ಕನೆ ಸ್ಕಂಧದಲ್ಲಿ ಬರುತ್ತದೆ.

ಭಾಗವತ ಪುರಾಣದಲ್ಲಿ ಮಹಾರಾಜ ನಭಗ ಮತ್ತವ ಮಗ ನಾಭಾಗನ ಕಥೆಯೊಂದು ಬರುತ್ತೆ.
ಅದು ಹೀಗಿದೆ.

ಮಹಾರಾಜ ನಭಗ, ನಾಭಾ ಹೆಸರಿನ ಮನುವಿನ ಪುತ್ರ. ಈ ನಭಗನ ಪುತ್ರರಲ್ಲೊಬ್ಬನಾದ ನಾಭಾಗ ದೀರ್ಘ ಕಾಲದವರೆಗೆ ಗುರುಕುಲದಲ್ಲಿ ವ್ಯಾಸಂಗ ಮಾಡುತ್ತಿದ್ದ. ಈ ಕಾಲದಲ್ಲಿ ಅವನ ಹಿರಿಯ ಸಹೋದರರು ನಾಭಾಗನು ಇಷ್ಟು ವರ್ಷವಾದರೂ ಮರಳಿಬಾರದಿದ್ದುದರಿಂದ ಆತನೆಲ್ಲೋ ಸಂನ್ಯಾಸಿಯಾಗುವ ವ್ರತ ಕೈಗೊಂಡಿರಬೇಕೆಂದು ತಿಳಿದು, ರಾಜ್ಯದಲ್ಲಿ ಅವನಿಗೆ ಪಾಲು ಕೊಡಬೇಕೆನ್ನುವುದನ್ನು ಪರಿಗಣಿಸದೆ ತಮ್ಮ ತಮ್ಮಲ್ಲೆ ಹಂಚಿಕೊಂಡುಬಿಟ್ಟರು. ನಾಭಾಗ ಹಿಂದಿರುಗಿದಾಗ ತಮ್ಮ ತಂದೆಯನ್ನೇ ಅವನ ಪಾಲಿನ ಆಸ್ತಿ ಎಂದು ಅವನ ಜೊತೆಯಲ್ಲಿ ನಭಗನನ್ನು ಕಳುಹಿಸಿಕೊಟ್ಟರು.

ತನ್ನ ಕಣ್ಣೆದುರೇ ನಾಭಾಗನನ್ನು ವಂಚಿಸಿದ ತನ್ನ ಮಕ್ಕಳ ಬಗ್ಗೆ ನಭಾಗನಿಗೆ ಬೇಸರವಾಯಿತು. ಅವನ ಮೇಲಿನ ಕರುಣೆಯಿಂದ ಎರಡು ವಿಶೇಷ ಮಂತ್ರಗಳನ್ನು ಅವನಿಗೆ ನೀಡಿ, “ಅಂಗೀರನ ವಂಶಸ್ಥರು ಈಗೊಂದು ಮಹಾ ಯಜ್ಞವನ್ನು ಕೈಗೊಂಡಿರುವರು. ಅವರೆಷ್ಟೇ ಬುದ್ಧಿಶಾಲಿಗಳಾಗಿದ್ದರೂ ಯಾಗದ ಪ್ರತಿ ಆರನೇ ದಿನ ಭ್ರಾಂತರಾಗಿ ಮಂತ್ರವನ್ನು ತಪ್ಪು ತಪ್ಪಾಗಿ ಹೇಳುವರು. ಆ ಸಮಯದಲ್ಲಿ ನೀನು ಅಲ್ಲಿ ಉಪಸ್ಥಿತನಿದ್ದು ಅದನ್ನು ಸರಿಪಡಿಸು. ತುಷ್ಟರಾಗುವ ಅವರು ಯಜ್ಞದ ನಂತರ ಉಳೀಯುವ ಸಂಪತ್ತನ್ನು ನಿನಗೆ ನೀಡುವರು” ಎಂದು ಸೂಚಿಸಿದನು.

ಅದರಂತೆ ನಾಭಾಗನು ಯಜ್ಞ ಶಾಲೆಗೆ ಹೋಗಿ ವೈಶ್ವದೇವನನ್ನು ಕುರಿತ ಮಂತ್ರಗಳನ್ನು ಪಟಿಸಿದನು. ಅಂಗೀರ ವಂಶಸ್ಥರು ಅವನಿಗೆ ಉಳಿದ ಸಂಪತ್ತನ್ನು ನೀಡುತ್ತಿರುವಾಗ ಉತ್ತರ ದಿಕ್ಕಿನಿಂದ ಕಪ್ಪು ಬಣ್ಣದ ವ್ಯಕ್ತಿಯೊಬ್ಬ ಅಲ್ಲಿಗೆ ಬಂದು, “ ಈ ಯಜ್ಞ ಸ್ಥಳದ ಎಲ್ಲ ಸಂಪತ್ತೂ ನನಗೆ ಸೇರಬೇಕು” ಎಂದು ತಡೆದನು.

ಕೊನೆಗೆ ಅವರಿಬ್ಬರೂ ವ್ಯಾಜ್ಯ ಪರಿಹಾರಕ್ಕಾಗಿ ನಭಗನನ್ನು ಆಶ್ರಯಿಸಿದರು. ನಡೆದ ಎಲ್ಲವನ್ನೂ ಕೂಲಂಕಷವಾಗಿ ವಿಚಾರಿಸಿದ ಆತನು ಯಜ್ಞ ನಡೆಸುವಾಗ ಋಷಿಗಳು ಎಲ್ಲ ಸಂಪತ್ತನ್ನೂ ಅದಾಗಲೇ ಶಿವನಿಗೆ ಅರ್ಪಿಸಿದ್ದನ್ನು ಮನಗಂಡನು. ಅದರಂತೆ, ಆ ಎಲ್ಲವನ್ನು ಆತನಿಗೇ ಅರ್ಪಿಸುವಂತೆ ಮಗನಿಗೆ ಹೇಳಿದನು. ಆ ಕಪ್ಪು ಬಣ್ಣದ ವ್ಯಕ್ತಿಯು ಶಿವನೇ ಆಗಿರಲು, ಸಹರ್ಷದಿಂದ ನಾಭಾಗನು ಸಂಪತ್ತನ್ನು ಶಿವನಿಗೆ ಅರ್ಪಿಸಿ ಕರುಣೆಗಾಗಿ ಯಾಚಿಸಿದನು.

ನಾಭಾಗನ ಸದ್ವರ್ತನೆಯಿಂದ ಸಂತಸಗೊಂಡ ಪರಶಿವ ಆತನ ಮೇಲೆ ಕೃಪೆದೋರಿ ಅದನ್ನು ಆತನಿಗೇ ಮರಳಿಸಿ, ಜೊತೆಗೆ ದಿವ್ಯ ಜ್ಞಾನವನ್ನೂ ಕರುಣಿಸಿ ಅಂತರ್ಧಾನನಾದನು.

– ಈ ಕಥೆ, ಭಾಗವತದ ೯ನೇ ಸ್ಕಂಧ, ೪ನೇ ಅಧ್ಯಾಯದಲ್ಲಿ ಬರುತ್ತದೆ. ಸಾತ್ತ್ವಿಕ ಮನಸ್ಸು, ಹಿರಿಯರ ಮಾತಿನಲ್ಲಿ ಗೌರವವಿರುವ ಯಾವ ವ್ಯಕ್ತಿಯೇ ಆದರೂ ವಿಶೇಷ ಕೃಪೆಗೆ ಪಾತ್ರನಾಗುತ್ತಾನೆ ಎನ್ನುವುದು ಈ ಕಥೆಯ ತಿರುಳು.